ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅಪಘಾತ ವಲಯದ ಮರಣ ಮೃದಂಗ, ಐದು ವರ್ಷಗಳಲ್ಲಿ 1,820 ಮಂದಿ ಸಾವು

ಐದು ವರ್ಷಗಳಲ್ಲಿ 1,820 ಮಂದಿ ಸಾವು; 11,200 ಗಾಯಾಳುಗಳು
Last Updated 20 ಡಿಸೆಂಬರ್ 2021, 3:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಹದಿನೈದು ದಿನಗಳ ಹಿಂದೆ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್‌, ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಇನ್ನೂ ಮಾಸಿಲ್ಲ. ಹಿರಿಯೂರು, ಮೊಳಕಾಲ್ಮುರು, ಚಳ್ಳಕೆರೆ, ಹೊಳಲ್ಕೆರೆಯಲ್ಲಿಯೂ ಇಂತಹುದೇ ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ರೀತಿ ಅಪಘಾತದಿಂದಲೇ ವಾರದೊಳಗೆ ಹಿರಿಯೂರಿನಲ್ಲಿ ನಾಲ್ವರು, ಚಳ್ಳಕೆರೆಯಲ್ಲಿ ಮೂವರು, ಮೊಳಕಾಲ್ಮುರಿನಲ್ಲಿ ಇಬ್ಬರು ಹಾಗೂ ಹೊಳಲ್ಕೆರೆಯ ಕುಡಿನೀರು ಕಟ್ಟೆ ಗೇಟ್‌ ಸಮೀಪದಲ್ಲಿ ಒಬ್ಬ ಕುರಿಗಾಯಿ ಸೇರಿ 45 ಕುರಿಗಳು ಮೃತಪಟ್ಟಿವೆ. ಅಪಘಾತಗಳಿಂದ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಸಾವು–ನೋವು, ನಷ್ಟಕ್ಕೆ ಕಡಿವಾಣ ಬೀಳುತ್ತಲೇ ಇಲ್ಲ.

ಜಿಲ್ಲೆಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾವು–ನೋವುಗಳು ಹೆಚ್ಚಾಗಿ ಸಂಭವಿಸುತ್ತಿವೆ. ಅಪಘಾತ ವಲಯಗಳಲ್ಲಿ ಸಂಚಾರ ಸೂಚನಾ ಫಲಕಗಳ ಕೊರತೆಯಿಂದ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಅಪಘಾತ ವಲಯಗಳನ್ನು ನೋಡಿದರೆ ಇವೇನು ರಸ್ತೆಗಳೋ ಅಥವಾ ಸಾವಿನ ದಾರಿಗಳೋ ಎಂಬ ಅನುಮಾನ ಬರುತ್ತದೆ. ಸಹಜ ಸಾವು, ವಿವಿಧ ರೋಗಗಳ ಕಾರಣಕ್ಕೆ ಸಾವು, ಆತ್ಮಹತ್ಯೆ ಪ್ರಕರಣ ಒಂದೆಡೆಯಾದರೆ, ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೆದ್ದಾರಿಗಳಲ್ಲಿ ಅತಿ ವೇಗದ ಚಾಲನೆ ಕೂಡ ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಸತತ 5 ವರ್ಷಗಳಲ್ಲಿ ನಡೆದ ಅಪಘಾತ ಪ್ರಕರಣಗಳ ಪೈಕಿ ರಾಷ್ಟ್ರೀಯ ಹೆದ್ದಾರಿ–4, 13, 150(ಎ)ರಲ್ಲಿ ಹೆಚ್ಚು ಅಪಘಾತಗಳಾಗಿವೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಪ್ರಾಣ ಕಳೆದುಕೊಂಡವರೇ ಹೆಚ್ಚು. ರಾಜ್ಯ ಹೆದ್ದಾರಿ–47, 48ರಲ್ಲೂ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ. ಹೀಗಾಗಿ ಅನೇಕರು ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಗಾಯಾಳುಗಳಾಗಿದ್ದಾರೆ. ‌

ಸಾವಿರಕ್ಕೂ ಹೆಚ್ಚು ಜೀವಗಳು ಬಲಿ: 2017ರಲ್ಲಿ 310 ಅಪಘಾತಗಳು ನಡೆದು, 367 ಮಂದಿ ಸಾವಿಗೀಡಾಗಿದ್ದಾರೆ. 2018ರಲ್ಲಿ 326 ಅಪಘಾತಗಳು ನಡೆದು, 371 ಮಂದಿ ಮೃತಪಟ್ಟಿದ್ದಾರೆ. 2019ರಲ್ಲಿ 343 ಅಪಘಾತಗಳು ನಡೆದು, 390 ಮಂದಿ ಮರಣ ಹೊಂದಿದ್ದಾರೆ. 2020ರಲ್ಲಿ 351 ಅಪಘಾತಗಳು ನಡೆದು, 386 ಮಂದಿ ಕೊನೆಯುಸಿರೆಳೆದಿದ್ದಾರೆ. 2021ರಲ್ಲಿ ಡಿಸೆಂಬರ್ 15ರವರೆಗೆ 286 ಅಪಘಾತಗಳಲ್ಲಿ 306 ಮಂದಿ ಬಲಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಇಳಿಕೆಯ ಬದಲು ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

2017ರಿಂದ ಈವರೆಗೆ 5,614 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿ, ಬರೋಬ್ಬರಿ 11,200 ಮಂದಿ ಗಾಯಗೊಂಡಿದ್ದಾರೆ. ಚಾಲಕರು, ಕ್ಲೀನರ್‌ಗಳು, ರೈತರು, ಬಡವರು ಹೀಗೆ ಅನೇಕರು ಮಾರಕವಲ್ಲದ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಜೀವನ ನಿರ್ವಹಣೆಗೂ ತೊಂದರೆ ಅನುಭವಿಸುವಂತಾಗಿದೆ.

ಪಾಲನೆಯಾಗದ ಸುಪ್ರೀಂ ನಿರ್ದೇಶನ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ನಡೆಸಿದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. 2017ರಿಂದ ಪ್ರತಿ ವರ್ಷ ಅಪಘಾತಗಳ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

2020ರ ಜನವರಿ ತಿಂಗಳಿನಿಂದ ಡಿಸೆಂಬರ್ ಮೂರನೇ ವಾರದವರೆಗೂ ಮಾರಣಾಂತಿಕ ಅಪಘಾತಗಳ ಸಂಖ್ಯೆ ಪ್ರಮಾಣ ಶೇ 29.25 ಹಾಗೂ ಸಾವುಗಳ ಸಂಖ್ಯೆ ಶೇ 32 ಇತ್ತು. 2021ಕ್ಕೆ ಹೋಲಿಸಿದರೆ, ತುಸು ತಗ್ಗಿದೆ. ಶೇ 23.58 ಹಾಗೂ ಸಾವುಗಳ ಸಂಖ್ಯೆ ಶೇ 25.5ಕ್ಕೆ ಇಳಿಕೆ ಆಗಿದೆ. ಆದರೆ, 2020ರ ಹಿಂದಿನ ನಾಲ್ಕು ವರ್ಷದ ಸರಾಸರಿ ಗಮನಿಸಿದರೆ, ಆ ಅವಧಿಗಳಲ್ಲಿ ಏರಿಕೆ ಆಗಿರುವುದನ್ನು ಪೊಲೀಸ್‌ ಇಲಾಖೆಯ ಅಂಕಿ–ಅಂಶಗಳು ಸಾಬೀತುಪಡಿಸುತ್ತವೆ.

‘ಬಹುತೇಕ ಅಪಘಾತಗಳಿಗೆ ಮಾನವ ಲೋಪವೇ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಮದ್ಯ ಸೇವಿಸಿ ವಾಹನ ಓಡಿಸುವುದು, ತರಬೇತಿ ಉಳ್ಳವರಾಗಿದ್ದರೂ ಎಡಗಡೆಯಿಂದ ಹಿಂದಿಕ್ಕಲು ಪ್ರಯತ್ನಿಸುವುದು, ಸೀಟ್‌ ಬೆಲ್ಟ್‌ ಬಳಸದೆಯೇ ಇರುವುದು, ದ್ವಿಚಕ್ರ ವಾಹನಗಳಾದರೆ ಹೆಲ್ಮೆಟ್‌ ಧರಿಸದೆಯೇ ಇರುವುದು, ತೆರಳುವ ಮುನ್ನ ವಾಹನಗಳ ಸುಸ್ಥಿತಿ ಪರೀಕ್ಷಿಸದಿರುವುದು, ರಸ್ತೆ ಮೇಲೆ ಮನಬಂದತೆ ವಾಹನ ಓಡಿಸುವುದು, ಚಾಲಕರ ಅತಿಯಾದ ವೇಗ, ಅತಿಯಾದ ಆತ್ಮವಿಶ್ವಾಸ, ಸಮಯ ಇದ್ದರೂ ಮುಂಚಿತವಾಗಿ ಊರು ತಲುಪಬೇಕು ಎಂಬ ನಿರ್ಧಾರವೇ ಅನೇಕ ಅಪಘಾತಗಳಿಗೆ ಕಾರಣ’ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಾಲಕೃಷ್ಣ.

***

ಅಪಘಾತ ವಲಯಗಳಲ್ಲಿ ಅಪಾಯ ಅಥವಾ ಅಪಘಾತ ಸ್ಥಳದ ಸೂಚನಾ ಫಲಕ ಅಳವಡಿಸಬೇಕಿದೆ. ಬೆಳಕಿನ ಪ್ರತಿಫಲನ ಅಳವಡಿಸಲು ಸೂಚಿಸಲಾಗಿದೆ. ಆರ್‌ಟಿಒ ಅಧಿಕಾರಿಗಳ ಜತೆ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.

ಜಿ. ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮದ್ಯ ಸೇವನೆ ಕುರಿತು ರಾತ್ರಿ ಪಾಳಿಯಲ್ಲಿ ಚಾಲಕರನ್ನು ತಪ್ಪದೇ ನಿತ್ಯ ತಪಾಸಣೆ ಮಾಡಬೇಕು. ಅತಿ ವೇಗಕ್ಕೆ ಕಡಿವಾಣ ಬೀಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆಗ ಅಪಘಾತ ಪ್ರಕರಣಗಳು ಕಡಿಮೆಯಾಗಲಿವೆ. ಬಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ

ದ್ವಿಪಥ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ವಿಸ್ತರಿಸಿದ ನಂತರ ಅಪಘಾತಗಳ ಪ್ರಮಾಣ ಹೆಚ್ಚಿದೆ ಎಂಬ ವಾದವಿದೆ. ಮಿತಿ ಮೀರಿದ ವೇಗ ಅಪಘಾತಕ್ಕೆ ಬಹುಮುಖ್ಯ ಕಾರಣವಾದರೆ, ಚಾಲನೆಯಲ್ಲಿನ ನಿರ್ಲಕ್ಷ್ಯ, ತಾಂತ್ರಿಕ ದೋಷ ಕೂಡ ಕಾರಣವಾಗಿವೆ.

ಕೆ.ಎಚ್. ರಂಗನಾಥ್, ಟಾಟಾಏಸ್ ಚಾಲಕ

ಜಿಲ್ಲೆಯಲ್ಲಿವೆ 36 ಅಪಘಾತ ವಲಯ

ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಮುರುಘಾಮಠ ಕ್ರಾಸ್, ಜೆಎಂಐಟಿ ವೃತ್ತದ ತಿರುವು, ಬಸವೇಶ್ವರ ಆಸ್ಪತ್ರೆ ತಿರುವು, ಹೊಸ ರೈಲ್ವೆ ಕೆಳಸೇತುವೆ, ನಾಮಕಲ್ ಗ್ಯಾರೇಜ್ ಸಮೀಪ, ತಾಲ್ಲೂಕಿನ ಚಿಕ್ಕಬೆನ್ನೂರು, ಲಕ್ಷ್ಮಿಸಾಗರ, ಕೊಳಾಳ್, ಕುಂಚಿಗನಾಳ್ ಪೆಟ್ರೋಲ್ ಬಂಕ್‌ ಸಮೀಪ, ಕ್ಯಾದಿಗೆರೆಯಿಂದ ಲಲ್ಲು ಡಾಬಾ ಮಧ್ಯೆ, ಚಿಕ್ಕಗೊಂಡನ ಹಳ್ಳಿಯಿಂದ ಮಾಡನಾಯಕನಹಳ್ಳಿ ಮಧ್ಯೆ ಅಪಘಾತ ಸಂಭವಿಸುತ್ತಿವೆ.

ಹಿರಿಯೂರು ನಗರದ ಸ್ವಾಮಿ ಹೋಟೆಲ್, ತಾಲ್ಲೂಕಿನ ಜೆ.ಜಿ.ಹಳ್ಳಿ, ಗೊರಲದಕು ಗೇಟ್‌, ಕೆ.ಆರ್.ಹಳ್ಳಿ ಗೇಟ್, ಆದಿವಾಲ, ಬಾಲೇನಹಳ್ಳಿ ಕ್ರಾಸ್, ಗಿಡ್ಡೊಬನಹಳ್ಳಿ ಗೇಟ್, ಬುರುಜನರೊಪ್ಪ ಗೇಟ್, ಭೂತಪ್ಪನ ದೇಗುಲ, ಚನ್ನಮ್ಮನಹಳ್ಳಿ ಗೇಟ್, ಯರಬಳ್ಳಿ ಗೇಟ್, ಗೊಲ್ಲಹಳ್ಳಿ, ಹೊಳಲ್ಕೆರೆ ವ್ಯಾಪ್ತಿಯಲ್ಲಿ ಚಿಕ್ಕಜಾಜೂರು ತಿರುವಿನಿಂದ ಹೊಳಲ್ಕೆರೆ ನಗರ ಮಧ್ಯೆ, ಟಿ.ನುಲೇನೂರು ಗೇಟ್‌ ಸಮೀಪ, ಮಲ್ಲಾಡಿಹಳ್ಳಿ ಕ್ರಾಸ್, ಹೊಸದುರ್ಗ ವ್ಯಾಪ್ತಿಯಲ್ಲಿ ಮಧುರೆದಿಬ್ಬ ಅಪಘಾತ ಸ್ಥಳಗಳಾಗಿವೆ.

ಚಳ್ಳಕೆರೆ ವ್ಯಾಪ್ತಿಯಲ್ಲಿ ಹೊಟ್ಟೆಪ್ಪನಹಳ್ಳಿ ಗೇಟ್, ಬಳ್ಳಾರಿ ರಸ್ತೆಯಿಂದ ಚಳ್ಳಕೇರಮ್ಮ ದೇಗುಲ ಸಮೀಪದ ವಿಭಜಕ, ಚೌಳೂರು ಗೇಟ್, ಕಡೆಹುಡೆ ಗೇಟ್‌ನಿಂದ ಎನ್‌.ಜಿ. ಗೇಟ್‌, ಗರಣಿ ಕ್ರಾಸ್, ಮೊಳಕಾಲ್ಮುರು ವ್ಯಾಪ್ತಿಯಲ್ಲಿ ಬಿ.ಜಿ. ಕೆರೆಯಿಂದ ಹೊಸಕೆರೆ ಸೇತುವೆ, ಕಮ್ಮರ್ ಕವಲುನಿಂದ ಬಿಎಸ್‌ಎನ್‌ಎಲ್ ಟವರ್, ಹಾನ್‌ಗಲ್, ಬೀರಾಪುರ, ತಮೇನಹಳ್ಳಿ ಸೇರಿ ಒಟ್ಟು ಜಿಲ್ಲೆಯ 36 ಅಪಘಾತ ಸಂಭವಿಸುವ ಬ್ಲ್ಯಾಕ್‌ ಸ್ಪಾಟ್‌ಗಳಾಗಿವೆ.

ಸರಣಿ ಅಪಘಾತಕ್ಕೆ ಕಾರಣಗಳೇನು?

‘ರಾತ್ರಿ ವೇಳೆ ಹೆದ್ದಾರಿ ಮಾರ್ಗದಲ್ಲಿ ಲಾರಿ ಸೇರಿ ಇತರ ವಾಹನ ಕೆಟ್ಟರೆ ಅಲ್ಲಿಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಒಂದೆಡೆ ಕತ್ತಲು, ಮತ್ತೊಂದೆಡೆ ಚಳಿಗಾಲವಾದ್ದರಿಂದ ಮಂಜು ಆವರಿಸಿ ಮುಂದೆ ನಿಂತ ವಾಹನ ಕಾಣಿಸದೆಯೇ ರಾಷ್ಟ್ರೀಯ ಹೆದ್ದಾರಿ 4ರಲ್ಲೇ ಒಂದರ ಹಿಂದೆ ಮತ್ತೊಂದರಂತೆ ವಾಹನಗಳು ಡಿಕ್ಕಿ ಹೊಡೆದು ಸುಮಾರು ಅಪಘಾತ ಸಂಭವಿಸಿವೆ. ಒಮ್ಮೊಮ್ಮೆ ಸರಣಿ ಅಪಘಾತಗಳು ಆಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವಾಹನಗಳು ಕೆಟ್ಟು ನಿಂತ ಸ್ಥಳದಲ್ಲಿ ಪ್ರಕಾಶಮಾನ ಬೆಳಕಿನ ದೀಪ (ಸ್ಟ್ರೀಟ್‌ ಲೈಟ್‌) ಹತ್ತದೆ ಇರುವುದರಿಂದಲೂ ಅಪಘಾತಗಳು ಸಂಭವಿಸಿವೆ. ಇದು ಕೆಲ ಪ್ರಕರಣಗಳ ತನಿಖೆ ವೇಳೆ ಕಂಡುಬಂದಿದೆ. ದೀಪ ಅಳವಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕೆಟ್ಟು ನಿಂತ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಲು ಇಲಾಖೆಯ ಹೈವೇ ಸಂಚಾರಿ ವಾಹನಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ರಾತ್ರಿ ಹೆಚ್ಚು ಗಸ್ತು ತಿರುಗುವಂತೆ ಆದೇಶಿಸಲಾಗಿದೆ. ಈ ವಿಚಾರವಾಗಿ ಪ್ರಾಧಿಕಾರದ ವಾಹನಗಳು ಕಾರ್ಯನಿರ್ವಹಿಸಬೇಕು. ತೆರವುಗೊಳಿಸಲು ಮುಂದಾಗದ ವಾಹನಗಳ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಂಪೂರ್ಣ ಸವೆದ ಟೈರ್‌ಗಳ ಮೂಲಕ ಅಧಿಕ ದೂರ ಕ್ರಮಿಸುವುದು ಹಾಗೂ ನಿಗದಿಗಿಂತಲೂ ಹೆಚ್ಚು ಭಾರದ ವಸ್ತುಗಳನ್ನು ತುಂಬುವುದರಿಂದ ಟೈರ್‌ ಸಿಡಿದು ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಈ ರೀತಿಯ ಅಪಘಾತ ಲಾರಿಗಳ ಮೂಲಕವೇ ಆಗಿದೆ’ ಎಂದು ತಿಳಿಸಿದ್ದಾರೆ.

155 ಅಪಘಾತ, 45ಕ್ಕೂ ಹೆಚ್ಚು ಸಾವು

- ಸುವರ್ಣಾ ಬಸವರಾಜ್

ಹಿರಿಯೂರು:2021ರ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ ತಾಲ್ಲೂಕಿನ ಕಸಬಾ ಮತ್ತು ಜವನಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 155 ಅಪಘಾತ ಪ್ರಕರಣಗಳು ವರದಿಯಾಗಿದ್ದು, 45ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಬಹುತೇಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿ–4ರ ಆದಿವಾಲ ಗ್ರಾಮದಿಂದ ಜವನಗೊಂಡನಹಳ್ಳಿ ಮಧ್ಯದಲ್ಲಿ ಸಂಭವಿಸಿವೆ. 2021ರ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 68 ಪ್ರಕರಣಗಳು ವರದಿಯಾಗಿವೆ. 16 ಜನ ಮೃತಪಟ್ಟಿದ್ದಾರೆ. ಜವನಗೊಂಡನಹಳ್ಳಿ ಸಮೀಪ 9, ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಆಚೆ ಈಚೆ 5, ಮೇಟಿಕುರ್ಕೆ ಹತ್ತಿರ 5, ಗೊರ್ಲಡುಕು ಗೇಟ್‌ನಲ್ಲಿ 4, ಆದಿವಾಲ ಆಚೀಚೆ 4, ಆನೆಸಿದ್ರಿ ಗೇಟ್‌ನಲ್ಲಿ 3, ವಡ್ಡನಹಳ್ಳಿ, ಪಟ್ರೆಹಳ್ಳಿ ಸಮೀಪ ಒಂದೊಂದು ಅಪಘಾತಗಳು ನಡೆದಿವೆ.

ಮೇ ತಿಂಗಳಿಂದ ನವೆಂಬರ್‌ ಅಂತ್ಯದವರೆಗೆ 95 ಅಪಘಾತಗಳು ಸಂಭವಿಸಿವೆ. 30ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಐಮಂಗಲ, ಅಬ್ಬಿನಹೊಳೆ ಠಾಣೆಗಳ ವ್ಯಾಪ್ತಿಯಲ್ಲಿನ ಅಪಘಾತಗಳನ್ನು ಪರಿಗಣಿಸಿದಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆ 200 ದಾಟುತ್ತದೆ. ಮೃತರ ಸಂಖ್ಯೆ 60ಕ್ಕಿಂತ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಲಾರಿ, ಬಸ್ಸು, ಕಾರುಗಳ ನಡುವೆ ಹೆಚ್ಚಿನ ಅಪಘಾತಗಳು ಸಂಭವಿಸಿದ್ದರೆ, ಗ್ರಾಮೀಣ ಭಾಗದಲ್ಲಿ ಬೈಕು, ಲಗೇಜ್ ವಾಹನಗಳು ಹೆಚ್ಚು.

ರಸ್ತೆಯಲ್ಲಿನ ಇಳಿಜಾರು ಕಾರಣ:‘ಹಿರಿಯೂರು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಆಲೂರು ಕ್ರಾಸ್ ಸಮೀಪ ರಸ್ತೆ ತುಂಬ ಇಳಿಜಾರಾಗಿದ್ದು, ವಾಹನಗಳು ಮಿತಿ ಮೀರಿದ ವೇಗದಲ್ಲಿ ಹೋಗುವುದು, ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಬೆಳಕಿನಲ್ಲಿ ರಸ್ತೆ ಕಾಣದಂತಾಗುವುದು ಹೆಚ್ಚಿನ ಅಪಘಾತಕ್ಕೆ ಕಾರಣ. ಇದೇ ರೀತಿ ಆನೆಸಿದ್ರಿ ಗೇಟ್, ಗೊರ್ಲಡುಕು ಬಳಿಯೂ ರಸ್ತೆ ತುಂಬಾ ಇಳಿಜಾರಾಗಿದೆ’ ಎನ್ನುತ್ತಾರೆ ನಿವೃತ್ತ ಎಸ್ಐ ಹಾಲಪ್ಪ.

ಅವೈಜ್ಞಾನಿಕ ಕ್ರಾಸ್:‘ಕಸ್ತೂರಿರಂಗಪ್ಪನಹಳ್ಳಿ ಗೇಟ್ ಬಳಿ ಹೆದ್ದಾರಿ ಮಧ್ಯದಲ್ಲಿ ತಿರುವು ಕೊಟ್ಟಿದ್ದು, ಬೆಂಗಳೂರು ಕಡೆಯಿಂದ ಬರುವ ವಾಹನಗಳು ಇಳಿಜಾರಿನಲ್ಲಿ ಮಿತಿಮೀರಿದ ವೇಗದಿಂದ ಬರುವ ಕಾರಣ, ತಿರುವು ತೆಗೆದುಕೊಳ್ಳುವ ವಾಹನಗಳಿಗೆ ಡಿಕ್ಕಿ ಹೊಡೆದಿವೆ. ಇದೇ ರೀತಿ ಸೇವಾ ರಸ್ತೆಯಿಂದ ಹೆದ್ದಾರಿಗೆ, ಹೆದ್ದಾರಿಯಿಂದ ಸೇವಾ ರಸ್ತೆಗೆ ಪ್ರವೇಶಿಸುವ ವಾಹನಗಳ ನಡುವೆಯೂ ಅಪಘಾತಗಳು ಸಂಭವಿಸಿವೆ. ಜವನಗೊಂಡನಹಳ್ಳಿಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಕೆಳಸೇತುವೆಯಿಂದ ಸಾರ್ವಜನಿಕರು ಕೆಳಸೇತುವೆ ಬದಲಿಗೆ ಹೆದ್ದಾರಿ ಮೇಲೆ ನಡೆದು ಹೋಗುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಿವೆ’ ಎನ್ನುತ್ತಾರೆ ಜವನಗೊಂಡನಹಳ್ಳಿಯ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT