ಚಿತ್ರದುರ್ಗ: ಬೆಂಗಳೂರಿನ ಪಟೇಲ್ ಪ್ರತಿಷ್ಠಾನವು 2019ನೇ ಸಾಲಿನಲ್ಲಿ ನೀಡಲಿರುವ ಪಟೇಲ್ ಬೊಮ್ಮೇಗೌಡ ನೆನಪಿನ ‘ತತ್ವಶ್ರೀ ಪ್ರಶಸ್ತಿ’ಗೆ ಕವಿ, ಅನುಭಾವಿ ದೆಹಲಿಯ ಎಚ್.ಎಸ್. ಶಿವಪ್ರಕಾಶ್ ಅವರನ್ನು ಆಯ್ಕೆ ಮಾಡಿದೆ.
ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ಸಾಹಿತ್ಯಶ್ರೀ ಪ್ರಶಸ್ತಿ’ಯನ್ನು ಸಾಹಿತಿ, ಸಂಶೋಧಕ ಹೊಸದುರ್ಗದ ಬಾಗೂರು ಆರ್. ನಾಗರಾಜಪ್ಪ ಅವರಿಗೆ ನೀಡಲಾಗುವುದು ಎಂದು ಡಾ. ಮೀರಾಸಾಬಿಹಳ್ಳಿ ಶಿವಣ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಈ ಪ್ರಶಸ್ತಿಯೂ ಸ್ಮರಣ ಫಲಕ, ಪ್ರಶಸ್ತಿ ಪತ್ರ ಮತ್ತು ತಲಾ₹10 ಸಾವಿರ ನಗದು ಒಳಗೊಂಡಿದೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಶಿವಣ್ಣ ಅವರ ತೋಟದ ಮನೆಯಲ್ಲಿ ಜ. 26ರಂದು ರಾತ್ರಿ 7.30ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.