ಮೊಳಕಾಲ್ಮುರು: ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಲಕ್ಷಾಂತರ ಜನ ಭಕ್ತರನ್ನು ಆಕರ್ಷಿಸುತ್ತದೆ. ಆದರೆ, ಆದರೆ ದೇವಸ್ಥಾನ ಸಂಪರ್ಕಿಸುವ ರಸ್ತೆ ಹದಗೆಟ್ಟ ಕಾರಣ ಭಕ್ತರು ಪರದಾಡುವಂತಾಗಿದೆ.
ಗೌರಸಮುದ್ರ ಮಾರಮ್ಮ ದೇವಿ ಹಲವು ಜಿಲ್ಲೆಗಳ ಜನರ ಆರಾಧ್ಯ ದೈವ. ಜಾತ್ರೆಗೆ ಪ್ರತಿವರ್ಷ 2 ಲಕ್ಷ ಜನ ಸೇರುತ್ತಾರೆ.
ಜಾತ್ರೆಗೆ ಮೊದಲು ಶಾಸಕರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತದೆ. ಆದರೆ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಸಂಬಂಧ ಚರ್ಚೆ ನಡೆದರೂ ಪ್ರಯೋಜನ ಆಗುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಜಾತ್ರೆ ನಡೆಯುವ ಪ್ರದೇಶವನ್ನು 15 ಮಾರ್ಗಗಳಿಂದ ಸಂಪರ್ಕಿಸಬಹುದಾಗಿದೆ. ಇದರಲ್ಲಿ 8 ಮಾರ್ಗಗಳು ಮುಖ್ಯವಾಗಿದೆ. ಇವುಗಳನ್ನು ಜಾತ್ರೆಗೆ ಸಜ್ಜುಮಾಡಿ ಎಂದು ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರು, ದೇವಸ್ಥಾನ ಸಮಿತಿಯವರು ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದ್ದರು. ಅಧ್ಯಕ್ಷತೆ ವಹಿಸಿದ್ದಸಚಿವ ಬಿ. ಶ್ರೀರಾಮುಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಕಾರ್ಯರೂಪಕ್ಕೆಬಂದಿಲ್ಲ ಎಂದುಗ್ರಾಮದಚಂದ್ರಣ್ಣ ಆರೋಪಿಸಿದರು.
ಚಿತ್ರನಾಯಕನಹಳ್ಳಿ ಮಾರ್ಗದಲ್ಲಿ ರಸ್ತೆಗಳಿಗೆ ಮಣ್ಣು ಹಾಕಿ ಗುಂಡಿ ಮುಚ್ಚಲಾಗಿದೆ. ಕೋನಸಾಗರ, ಕೊಂಡ್ಲಹಳ್ಳಿ ರಸ್ತೆಗಳಲ್ಲಿ ದೊಡ್ಡ ಗುಂಡಿಗಳಿದ್ದು,ಯಾವುದೇ ಕ್ರಮ ಕೈಗೊಂಡಿಲ್ಲ. ಗೌರಸಮುದ್ರ- ತುಂಬಲು ರಸ್ತೆ ಅಗಲೀಕರಣ ಮಾಡಬೇಕು. ಸಾಧ್ಯವಾದಲ್ಲಿ ದ್ವಿಪಥ ರಸ್ತೆ ಮಾಡಿದಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ. ಇಲ್ಲಿ ಜಂಗಲ್ ತೆರವು ಮಾತ್ರ ಮಾಡ
ಲಾಗುತ್ತದೆಯೇ ವಿನಾ ಶಾಶ್ವತ ಕ್ರಮ ನಡೆಯುತ್ತಿಲ್ಲ ಎಂಬುದು ಅವರ ಆರೋಪ.
ಜಿಲ್ಲಾ ಪಂಚಾಯಿತಿಯಿಂದ ಕೆಲ ರಸ್ತೆಗಳ ಗುಂಡಿಗಳಿಗೆ ಮಣ್ಣು ಹಾಕಿಸಲಾಗಿದೆ. ಆದರೆ ಶಾಶ್ವತ ಕ್ರಮ ಕೈಗೊಂಡಿಲ್ಲ. ಮಳೆಯ ಕಾರಣ ಕೆಸರು ತುಂಬಿ ಸಂಚಾರಕ್ಕೆ ತೊಂದರೆಯಾಗಿದೆ. ಹಿರೇಹಳ್ಳಿ- ಪಾಲನಾಯಕನಕೋಟೆ- ಗೌರಸಮದ್ರ ರಸ್ತೆ, ಚಿತ್ರನಾಯಕನಹಳ್ಳಿ- ತುಂಬಲು ರಸ್ತೆ, ಕೊಂಡ್ಲಹಳ್ಳಿ-ಕೋನಸಾಗರ ಸಂಪರ್ಕ ರಸ್ತೆಗಳ ಡಾಂಬರೀಕರಣ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ತುಂಬಲಿಗೆ ಸಂಪರ್ಕಿಸುವ 15 ರಸ್ತೆಗಳ ಪೈಕಿ ದೇವರೆಡ್ಡಿಹಳ್ಳಿ ರಸ್ತೆ ಹೊರತುಪಡಿಸಿ ಉಳಿದವುಗಳ ಜಂಗಲ್ ತೆರವು ಮತ್ತು ತಾತ್ಕಾಲಿಕ ದುರಸ್ತಿ ಮಾಡಿಸಲಾಗಿತ್ತು. ಮಳೆ ಬಂದಿದ್ದು ಸಮಸ್ಯೆಗೆ ಕಾರಣವಾಯಿತು. 15 ರಸ್ತೆಗಳ ಪೈಕಿ 8 ರಸ್ತೆಗಳನ್ನು ಟಾಸ್ಕ್ ಫೋರ್ಸ್ನಲ್ಲಿ ನವೀಕರಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದುಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಕಾವ್ಯಾ ತಿಳಿಸಿದ್ದಾರೆ.
ಹಿರೇಹಳ್ಳಿ- ಗೌರಸಮುದ್ರ ರಸ್ತೆಯು ಜಿಲ್ಲಾ ಪಂಚಾಯಿತಿಅಥವಾ ಲೋಕೋಪಯೋಗಿ ಇಲಾಖೆಗಳಲ್ಲಿ ಯಾವ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಗೊಂದಲವಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
–ಕಾವ್ಯಾ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.