ಧರ್ಮಪುರ: ಧರ್ಮಪುರ ಕೆರೆಗೆ ನೀರು ಹರಿಸುವುದರಿಂದ ನೂರು ವರ್ಷದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದ್ದು, ಗುಳೇ ಹೋಗಿರುವಜನರು ಮತ್ತೆ ವಾಪಸ್ ಬಂದು ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಲಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ಹೇಳಿದರು.
ಇಲ್ಲಿನ ನಾಡಕಚೇರಿ ಆವರಣದಲ್ಲಿ ನೀರಾವರಿ ಹೋರಾಟಗಾರ ಎಚ್.ಎಲ್.ಗುಣ್ಣಯ್ಯ ವೇದಿಕೆಯಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಭೂಮಿಪೂಜೆಗೆ ಮುಖ್ಯಮಂತ್ರಿ ಜೂನ್ 4ರಂದು ಬರುತ್ತಿರುವ ಕಾರಣಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಬರಲಿದ್ದು, ಹೊಸಹಳ್ಳಿ ಬ್ಯಾರೇಜ್ನಿಂದ 13 ಕಿ.ಮೀ. ದೂರದ ಐತಿಹಾಸಿಕ ಧರ್ಮಪುರ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಹಾಗೂ ಸಚಿವರ ಸಹಕಾರದಿಂದ ₹ 90 ಕೋಟಿ ಅನುದಾನಕ್ಕೆ ಅನುಮೋದನೆ ಪಡೆಯಲಾಗಿದೆ.ಕೆಲ ವಿರೋಧಿಗಳು ಡಿಪಿಆರ್ ಆಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಅದಕ್ಕೆ ಕಿವಿಗೊಡಬೇಡಿ. ಕೆರೆಗೆ ನೀರು ಹರಿಯುವುದುಖಚಿತ’ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಧರ್ಮಪುರ ಕೆರೆ ಪ್ರವಾಸಿ ತಾಣವಾಗಲಿದೆ. ವಾಣಿವಿಲಾಸಸಾಗರದಿಂದ ತಾಲ್ಲೂಕಿನ 131 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ₹ 305 ಕೋಟಿ ಟೆಂಡರ್ ಆಗಿದೆ. ಎಲ್ಲಾ ಹಳ್ಳಿಗಳಿಗೂ ವಾಣಿವಿಲಾಸ ಸಾಗರದ ನೀರು ಪೂರೈಕೆಯಾಗಲಿದೆ. ಗಾಯಿತ್ರಿ ಜಲಾಶಯಕ್ಕೆ ₹ 276 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುವುದು. ಮಿನಿ ವಿಧಾನಸೌಧದ ಕಾಮಗಾರಿಗೂ ಭೂಮಿಪೂಜೆ ನೆರವೇರಲಿದೆ’ ಎಂದು ತಿಳಿಸಿದರು.
ಪ್ರವರ್ಗ 1ರ ವೇದಿಕೆ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ‘ಧರ್ಮಪುರ ಕೆರೆಯಿಂದ ಮತ್ತೆ ಬೇರೆ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಯೋಜನೆಯೂ ಇದೆ’ ಎಂದರು.
ಹಾರ್ಡ್ವೇರ್ ಶಿವಣ್ಣ, ಮದ್ದಿಹಳ್ಳಿ ದೊಡ್ಡಯ್ಯ, ಕಸವನಹಳ್ಳಿ ರಮೇಶ್, ಮೊಹಿನುದ್ದೀನ್, ಎಂ,ಶಿವಣ್ಣ, ಡಾ.ಎಂ.ಜಿ.ಗೋವಿಂದಯ್ಯ, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಸತ್ಯನಾರಾಯಣಗೌಡ, ಗಿರೀಶ್, ಶಿವಕುಮಾರ್ ಮಾತನಾಡಿದರು.