ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ‌ ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ತಂದೆ–ಮಗನ ಬಂಧನ

Last Updated 4 ನವೆಂಬರ್ 2021, 9:39 IST
ಅಕ್ಷರ ಗಾತ್ರ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ತಂದೆ- ಮಗ ಚೂರಿಯಿಂದ ಇರಿದು ಕೊಲೆ‌ ಮಾಡಿದ್ದಾರೆ.

ನಗರದ ರಥಬೀದಿಯ ಮಹಾಮ್ಮಾಯಿ ರಸ್ತೆಯಲ್ಲಿರುವ ವೀರ ವೆಂಕಟೇಶ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್(44) ಕೊಲೆಯಾದವರು. ಆರೋಪಿಗಳಾದ ಅದೇ ಅಪಾರ್ಟ್ ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

4 - 5 ದಿನಗಳ ಹಿಂದೆ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿ ಮಹಾನಗರ ಪಾಲಿಕೆಯಿಂದ ಸಿಮೆಂಟ್ ಹಾಕಿ ಸರಿ ಮಾಡಿದ್ದು, ಅದರ ಮೇಲೆ ಬೇರೆಯವರ ಕಾರು ಹೋಗುವ ವಿಚಾರದಲ್ಲಿ ಆರೋಪಿಗಳು ತನ್ನ ಗಂಡನೊಂದಿಗೆ ಜಗಳ ಮಾಡಿದ್ದರು ಎಂದು ವಿನಾಯಕ ಕಾಮತ್ ಅವರ ಪತ್ನಿ‌ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಕೆಲವರು ದೀಪಾವಳಿ ಆಚರಿಸುತ್ತಿದ್ದ ವೇಳೆ ವಿನಾಯಕ್‌ ಅವರು ಅಪಾರ್ಟ್ ಮೆಂಟ್ ಕೆಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರೊಂದಿಗೆ ಜಗಳ ಶುರುವಾಗಿದೆ. ಗಲಾಟೆ ಕೇಳಿ ನನ್ನ ಅತ್ತೆಯೂ ಕೆಳಕ್ಕೆ ಹೋಗಿದ್ದು, ಅವರನ್ನು ತಳ್ಳಿ, ಕೃಷ್ಣಾನಂದ ಕಿಣಿ ತಮ್ಮ ಕೈಯಲ್ಲಿದ್ದ ಚೂರಿನಿಂದ ವಿನಾಯಕ ಕಾಮತ್ ಅವರ ಎದೆಗೆ ಚುಚ್ಚಿದ್ದಾರೆ. ಅವರ ಮಗ ಅವಿನಾಶ್ ಕಿಣಿ ಕೂಡ ಕೊಲೆಗೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಲ್ಲೆಯಿಂದ ಗಂಭೀರ ಗಾಯಗೊಂಡ ವಿನಾಯಕ್ ಕಾಮತ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ 1.45 ಕ್ಕೆ ಅವರು ಮೃತಪಟ್ಟಿದ್ದಾರೆ.

ಬಂದರು ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT