ಮೂಲ್ಕಿ: ಇಲ್ಲಿನ ಸಸಿಹಿತ್ಲು ಮುಂಡ ಬೀಚ್ಗೆ ಪ್ರವಾಸಕ್ಕೆ ಬಂದಿದ್ದ 11 ಮಂದಿ ತಂಡದಲ್ಲಿ, 9 ಮಂದಿ ನೀರಿಗೆ ಇಳಿದಿದ್ದವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ನೀರು ಪಾಲಾಗಿದ್ದು, 7 ಮಂದಿ ರಕ್ಷಣೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸಾಣೂರಿನ ಸುಂದರ ಶೆಟ್ಟಿ (45) ಎಂದು ಗುರುತಿಸಲಾಗಿದೆ. ಹಳೆಯಂಗಡಿ ಬಳಿಯ ತೋಕೂರಿನ ಮೂಡುಮನೆಗೆ ಶುಕ್ರವಾರ ಮದುವೆ ಕಾರ್ಯಕ್ಕೆ ಬಂದಿದ್ದ 11 ಮಂದಿ, ಭಾನುವಾರ ಸಸಿಹಿತ್ಲು ಬೀಚ್ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
9 ಮಂದಿ ಮಾತ್ರ ನೀರಿಗೆ ಇಳಿದಿದ್ದರು. ಈ ವೇಳೆ ಮಹಿಳೆ ನೀರಿನ ಸೆಳೆತಕ್ಕೆ ಒಳಗಾಗಿದ್ದು, ಮುಳುಗುತ್ತಿದ್ದ ಅವರ ರಕ್ಷಣೆಗೆ ಮುಂದಾಗಿದ್ದ ಸುಂದರ ಶೆಟ್ಟಿ ಹಾಗೂ ಇನ್ನಿತರರು ಕೂಡ ನೀರಿನ ಸೆಳೆತಕ್ಕೆ ಸಿಕ್ಕು ಹಾಕಿಕೊಂಡರು. ಈ ವೇಳೆ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯ ಮಾಡಿದ್ದಾರೆ. ಅಷ್ಟರಲ್ಲಿಯೇ ಸುಂದರ ಶೆಟ್ಟಿ ಅವರು ನೀರಿ ಸೆಳೆತಕ್ಕೆ ಸಿಕ್ಕು ಹಾಕಿಕೊಂಡು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನೀರು ಪಾಲಾಗಿದ್ದ ವ್ಯಕ್ತಿಯನ್ನು ದಾಮೋದರ ಶೆಟ್ಟಿ ಎಂದು ಗುರುತಿಸಲಾಗಿದ್ದು, ಪತ್ತೆ ಕಾರ್ಯ ನಡೆದಿದೆ. 7 ಮಂದಿ ಕೂಡ ಚಿಕಿತ್ಸೆಗಾಗಿ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.