ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಕೊರತೆ; ಅಭಿವೃದ್ಧಿ ಕುಂಠಿತ

ಉಳ್ಳಾಲ ತಾಲ್ಲೂಕು ರಚನೆ: ಪೂರ್ವಭಾವಿ ಸಭೆಯಲ್ಲಿ ಶಾಸಕ ಯು.ಟಿ. ಖಾದರ್
Last Updated 9 ಜೂನ್ 2021, 2:42 IST
ಅಕ್ಷರ ಗಾತ್ರ

ಉಳ್ಳಾಲ: ‘ಗ್ರಾಮಮಟ್ಟದಲ್ಲಿ ಲಸಿಕೆಯ ಟೋಕನ್ ನೀಡುವ ಸಂದರ್ಭ ಆಧಾರ್ ಕಾರ್ಡ್, ಮೊಬೈಲ್‌ ಸಂಖ್ಯೆ ಕಡ್ಡಾಯವಾಗಿ ಪಡೆದುಕೊಳ್ಳಿ. ಈ ಮೂಲಕ ಟೋಕನ್‌ ದುರುಪಯೋಗ ವಾಗುವುದನ್ನು ತಪ್ಪಿಸಬಹುದು’ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಉಳ್ಳಾಲ ತಾಲ್ಲೂಕು ಘೋಷಣೆ ಯಾಗಿ ಒಂದು ವರ್ಷವಾಗಿದ್ದು, ಈ ಪ್ರಯುಕ್ತ ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ನೂತನ ತಾಲ್ಲೂಕಿಗೆ ಸಂಬಂಧಪಟ್ಟ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾ ರಿಗಳು, ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರಿಗೆ ಬರುವ ಅನುದಾನ ಕಡಿತವಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಹಿಂದಿನಂತೆ ಮಾಡಲು ಸಾಧ್ಯವಿಲ್ಲ. ಕೋವಿಡ್ ಕಾರಣದಿಂದಾಗಿ ರಾಜ್ಯ ಸರ್ಕಾರಕ್ಕೂ ಅನುದಾನ ನೀಡಲು ಅಸಾಧ್ಯವಾಗಿದೆ’ ಎಂದರು.

‘ಕಡಲ್ಕೊರೆತ, ನದಿ ಕೊರೆತ, ಗುಡ್ಡ ಜರಿಯುವುದು, ಘಟ್ಟದ ಮೇಲಿನ ನೀರು ನದಿ ಸೇರಿ ಸಮುದ್ರಕ್ಕೆ ಸೇರುವುದು ನನ್ನ ಗ್ರಹಚಾರ. ಜನರು ಬೈಯ್ಯುವುದು ಇಲಾಖೆ ಮತ್ತು ನಮ್ಮನ್ನು. ನದಿ ತೀರ ಪ್ರದೇಶದಲ್ಲಿ ಸಣ್ಣ ಬೋಟ್ ಇರಬೇಕು. ಬೋಟ್ ಇರುವವರನ್ನು ತಕ್ಷಣ ಗುರುತಿಸಿ ಇಡುವುದು ಉತ್ತಮ’ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಮದನ್ ಮೋಹನ್ ಮಾತನಾಡಿ, ‘ಮುಂಗಾರು ಆರಂಭದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ. ಗ್ರಾಮಕರಣಿಕರು ಮತ್ತು ಪಿಡಿಒಗಳು ಸಮನ್ವಯತೆ ಯೊಂದಿಗೆ ಕೆಲಸ ಮಾಡುವುದು ಅಗತ್ಯ. ಬೇರೆಯವರನ್ನು ಹೊಣೆಯಾಗಿಸು ವುದನ್ನು ಎಂದಿಗೂ ಸಹಿಸುವುದಿಲ್ಲ. ಅಪಾಯಕಾರಿ ಸ್ಥಿತಿ ಇರುವ ಜಾಗ ಗಳನ್ನು ಈಗಲೇ ಗುರುತಿಸಿ, ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಾಣಹಾನಿಯನ್ನು ತಡೆಯಬಹುದು. ಇನ್ಫೊಸಿಸ್ ಎದುರುಗಡೆ ಬಹಳಷ್ಟು ಅಪಾಯದಲ್ಲಿ ಮನೆಗಳಿವೆ. ಸೋಮೇಶ್ವರದಲ್ಲಿಯೂ ನೆರೆಹಾವಳಿ ಪ್ರದೇಶ ಇದೆ. ಜುಲೈ 15ರ ನಂತರ ಮಳೆ ಜಾಸ್ತಿಯಾಗುವ ಸಾಧ್ಯತೆ ಇದೆ’ ಎಂದರು.

ಉಳ್ಳಾಲ ತಾಲ್ಲೂಕು ನಿಯೋಜಿತ ತಹಶೀಲ್ದಾರ್ ಸಪ್ತಶ್ರೀ, ವಿಶೇಷಾಧಿಕಾರಿ ಅಕ್ರಂ ಬಾಷಾ ನಿಂಗ್‍ಜೋಯಿ, ಮಂಗಳೂರು ತಾಲ್ಲೂಕು ಪಂಚಾಯಿತಿ ಇಒ ನಾಗರಾಜ್, ಬಂಟ್ವಾಳ ತಾಲ್ಲೂಕು ಇಒ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಪಾಣೆಮಂಗಳೂರು ಹೋಬಳಿ ಕಂದಾಯ ಅಧಿಕಾರಿ ರಾಮ, ಉಳ್ಳಾಲ ಹೋಬಳಿ ಕಂದಾಯ ಅಧಿಕಾರಿ ಸ್ಟೀಫನ್, ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ, ಸೋಮೇಶ್ವರ ಪುರಸಭಾ ಪೌರಾಯುಕ್ತೆ ವಾಣಿ ವಿ. ಆಳ್ವ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಮಲಾರ್ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಉಪಸ್ಥಿತರಿದ್ದರು.

ಬೆಳ್ಮ ಗ್ರಾಮ ಪಂಚಾಯತ್ ಪಿಡಿಒ ನವೀನ್ ಹೆಗ್ಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT