ಕುಡಿಯುವ ನೀರಿಗೆ ತೊಂದರೆ ಇಲ್ಲ’
‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ರಚನೆಯಾಗಿದ್ದು ಇದರಲ್ಲಿ ತಾಲ್ಲೂಕು ಪಂಚಾಯಿತಿ ಇಒ ತಹಶೀಲ್ದಾರ್ ನೀರು ಸರಬರಾಜು ಇಲಾಖೆಯ ಎಇಇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದಾರೆ. ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ‘ಕೊಳವೆ ಬಾವಿಗಳನ್ನು ನವೀಕರಣ ಕಾರ್ಯಕ್ಕೆ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬಂದಿದ್ದು ಅವಶ್ಯಕತೆ ಇರುವ ಗ್ರಾಮಗಳಿಗೆ ಬಳಸಲಾಗುವುದು. ಇದಲ್ಲದೇ ಬೇರೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಬಳಿ ಎನ್ಡಿಆರ್ಎಫ್ ಫಂಡ್ ಇದೆ’ ಎಂದರು. ‘500 ಜನವಸತಿ ಪ್ರದೇಶಗಳು ಬಹುಗ್ರಾಮ ಕುಡಿಯುವ ನೀರನ್ನು ಅವಲಂಬಿಸಿದ್ದು ಅಲ್ಲಿನ ನೀರಿನ ಲಭ್ಯತೆಯನ್ನು ಗಮನಿಸಲಾಗುತ್ತಿದೆ. ಒಂದು ವೇಳೆ ನೀರು ಲಭ್ಯತೆ ಆಗದಿದ್ದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗುವುದು. ಸದ್ಯದ ಮಟ್ಟಿಗೆ ಕುಡಿಯುವ ತೊಂದರೆ ಇಲ್ಲ. ಚಾನಲ್ಗಳಲ್ಲಿ ಅವಲಂಬಿತರಾಗಿರುವ ಗ್ರಾಮಗಳಲ್ಲಿ ತೊಂದರೆ ಇಲ್ಲ. ಆದರೆ ನದಿಯನ್ನು ಅವಲಂಬಿಸಿರುವ ಹೊನ್ನಾಳಿ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ನೀರನ್ನು ಬಿಟ್ಟರೆ ಸಮಸ್ಯೆಯಾಗುವುದಿಲ್ಲ’ ಎಂದು ಹೇಳಿದರು.