ಹುಬ್ಬಳ್ಳಿ: ಧಾರವಾಡ ಸಮೀಪದ ಇಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಸ್ನೇಹಿತರ ಹಾಗೂ ತಮ್ಮ ಸಂಬಂಧಿಗಳ ದೇಹವನ್ನು ಪತ್ತೆ ಹಚ್ಚಲು ಖುದ್ದು ಕುಟುಂಬದವರೇ ಸಾಕಷ್ಟು ಸಮಯ ಪರದಾಡಬೇಕಾಯಿತು.
ಅಪಘಾತದಲ್ಲಿ ಮೃತಪಟ್ಟಿದ್ದವರ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಶವಾಗಾರಕ್ಕೆ ತರಲಾಗಿತ್ತು. ಇಲ್ಲಿಗೆ ಬರುತ್ತಿದ್ದಂತೆ ಸಂಬಂಧಿಕರ ಹಾಗೂ ಸ್ನೇಹಿತರ ದುಖಃದ ಕಟ್ಟೆಯೊಡೆದಿತ್ತು. ಕೆಲವರ ಮುಖಗಳು ಗುರುತೇ ಸಿಗದಷ್ಟು ಭೀಕರವಾಗಿತ್ತು. ಮುಖಕ್ಕೆ ಬಲವಾಗಿ ಪೆಟ್ಟು ಬಿದ್ದಿತ್ತು. ಪ್ರವಾಸಕ್ಕೆಂದು ದಾವಣಗೆರೆಯಿಂದ ಹೊರಡುವಾಗ ಧರಿಸಿದ್ದ ಬಟ್ಟೆಗಳ ಆಧಾರದ ಮೇಲೆ ಶವಗಳನ್ನು ಪತ್ತೆ ಹಚ್ಚಿದರು. ಶವ ಗುರುತು ಪತ್ತೆಯಾಗುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ನಗರದ ಸಿದ್ದೇಶ್ವರ ಪಾರ್ಕ್ ನಿವಾಸಿ ಉಮೇಶ ಶೆಟ್ಟರ್ ಘಟನೆಯನ್ನು ಮಾಧ್ಯಮಗಳ ಹಂಚಿಕೊಂಡು ‘ಶಾಲೆಯ ಸ್ನೇಹಿತರ ಜೊತೆಗೂಡಿ ಹೊರಟಿದ್ದ ನಮ್ಮ ಸಂಬಂಧಿ ಆಶಾ ಬೇತೂರ ಫೋನ್ ಕರೆ ಮಾಡಿ ವಾಹನ ಅಪಘಾತವಾಗಿದೆ ಎಂದು ತಿಳಿಸಿದ ತಕ್ಷಣವೇ ಸ್ಥಳಕ್ಕೆ ಹೋದೆವು. ಕ್ರೇನ್ ನೆರವಿನಿಂದ ಶವಗಳನ್ನು ಹೊರತೆಗೆಯಲಾಯಿತು. ಅಲ್ಲಿದ್ದ ಸ್ಥಿತಿ ನೋಡಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯಕ್ತ ಲಾಬೂರಾಮ್, ಡಿಸಿಪಿ ಆರ್.ಬಿ. ಬಸರಗಿ,ಡಿವೈಎಸ್ಪಿ ಎಂ.ಬಿ. ಸಂಕದಎಸಿಪಿ ಮಲ್ಲೇಶಪ್ಪ ಮಲ್ಲಾಪೂರ ಶವಾಗಾರಕ್ಕೆ ಭೇಟಿ ನೀಡಿದರು.