ಸಾಸ್ವೆಹಳ್ಳಿ: ಇಲ್ಲಿಗೆ ಸಮೀಪದ ಡಬಲ್ ಗೇಟಿನ ಉಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ರೈತರೇ ಸ್ವಂತ ಖರ್ಚಿನಿಂದ ತೆಗೆಸಿದ್ದಾರೆ.
ಉಪನಾಲೆಯಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ಕೆಳಭಾಗದ ಗದ್ದೆಗಳಿಗೆ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಇಲಾಖೆಯವರು ಸ್ಪಂದಿಸಿರಲಿಲ್ಲ. ಕೆಳಭಾಗದ 50ಕ್ಕೂ ಹೆಚ್ಚು ರೈತರು ಸ್ವಂತ ಖರ್ಚಿನಿಂದ ಹಿಟಾಚಿ ಬಳಸಿ ಉಪನಾಲೆ ಸ್ವಚ್ಛಗೊಳಿಸಿಕೊಂಡೆವು ಎಂದು ರೈತ ನರಸಿಂಹಪ್ಪ ತಿಳಿಸಿದರು.
ಮಳೆಗಾಲದಲ್ಲಿ ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಬೇಸಿಗೆಯಲ್ಲಿ ನೀರಿಗಾಗಿಯೇ ನಾವು ಜಗಳವಾಡಬೇಕಾಗುತ್ತದೆ. ಆದ್ದರಿಂದ ಈ ಕಾಲುವೆಗೆ ಶಾಶ್ವತ ಪರಿಹಾರವನ್ನು ನೀಡುವಂತೆ ಆಗಬೇಕು ಎಂದು ರೈತರು ಒತ್ತಾಯಿಸಿದರು.
ಭದ್ರಾ ಉಪನಾಲೆಯ 19ನೇ ಡಿಸ್ಟ್ರಿಬ್ಯೂಟ್ನಲ್ಲಿ ಹೂಳು ತುಂಬಿದ್ದು, ಇದು ಕಾಡಾ ವಿಭಾಗಕ್ಕೆ ಬರುತ್ತದೆ. ಇದನ್ನು ನೀರು ಬಳಕೆದಾರರ ಸಹಕಾರ ಸಂಘದವರೆ ನಿರ್ವಹಣೆ ಮಾಡಬೇಕಗಿತು. ಸಂಘದವರ ನಿರ್ಲಕ್ಷ್ಯವೇ ಕಾರಣ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ನಾರಾಯಣಸ್ವಾಮಿ ತಿಳಿಸಿದರು.
ರೈತರಾದ ನವೀನ್ ಕುಮಾರ್, ನರಸಿಂಹಪ್ಪ, ಸುರೇಶ್, ಅಮ್ಜಾದ್, ರಹಿಂ ಸಾಬ್, ಕರಿಬಸಪ್ಪ ಇದ್ದರು.