ಹರಿಹರ: ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2023ರ ಫೆಬ್ರುವರಿ 8 ಮತ್ತು 9ರಂದು ನಡೆಯುವ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಆಯ್ಕೆಯಾಗಿದ್ದಾರೆ.
‘ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮಠದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದಿನ ವರ್ಷದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಎಸ್.ವಿ.ರಾಮಚಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸಭೆ ಸಮ್ಮತಿ ಸೂಚಿಸಿತು’ ಎಂದು ಸಮಾಜದ ಹರಿಹರ ಘಟಕ ಅಧ್ಯಕ್ಷ ಕೆ.ಬಿ.ಮಂಜಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಸಮಾಜದ ಮುಖಂಡರಾದ ಸತೀಶ್ ಜಾರಕಿಹೊಳಿ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಲೇಖಕ ಹರ್ತಿಕೋಟೆ ವೀರೇಂದ್ರಸಿಂಹ, ಹೊದಿಗೆರೆ ರಮೇಶ್, ನಿವೃತ್ತ ಜಿಲ್ಲಾಧಿಕಾರಿ ಶಿವಪ್ಪ, ಜಿಗಳಿ ರಂಗಪ್ಪ, ಚಳಗೇರಿ ಸಣ್ಣ ತಮ್ಮಣ್ಣ, ಬಾವಿಕಟ್ಟಿ ಕರಿಬಸಪ್ಪ, ನಗರಸಭಾ ಸದಸ್ಯ ದಿನೇಶ್ ಬಾಬು, ಪಾರ್ವತಮ್ಮ ಇದ್ದರು.