ದಾವಣಗೆರೆ: ರೈತರ ಸಮಸ್ಯೆ, ಬೇಡಿಕೆಗಳ ಈಡೇರಿಕೆಗೆ ಸಂಬಂಧ ಇಲ್ಲಿನಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಭೆ ನಡೆಸಲಾಯಿತು. ಸಭೆಯಲ್ಲಿ ರೈತರ ಸಮಸ್ಯೆಗಳ ಪರಿಹಾರ ಸಂಬಂಧಸರ್ಕಾರದ ಗಮನ ಸೆಳೆಯುವ ಕುರಿತು ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, 6 ಲಕ್ಷ ಟನ್ ಉತ್ಪಾದನೆಯಾಗಿದೆ. ಕೇಂದ್ರದ ಕನಿಷ್ಠ ಬೆಂಬಲ ಬೆಲೆ ₹ 1950 ಇದೆ. ಆದರೆ ಪ್ರತಿ ಕ್ವಿಂಟಲ್ಗೆ ರೈತರಿಂದ ₹ 1,450ರಿಂದ ₹ 1,500ಗೆ ಖರೀದಿಸಲಾಗಿದೆ. ಇದರಿಂದ ರೈತರು ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಜಿಲ್ಲೆಯಲ್ಲಿ ಮೆಕ್ಕೆಜೋಳ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆಯ ಅಭಾವದಿಂದ ರೈತರಿಗೆ ನಷ್ಟವಾಗಿದೆ. ಕೊರೊನಾ ಕಾರಣ ಸಮರ್ಪಕ ಮಾರುಕಟ್ಟೆ ಇಲ್ಲದಿದ್ದ ಕಾರಣ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಬಗ್ಗೆ ರೈತ ಮುಖಂಡರು ಗಮನ ಸೆಳೆದರು.
ತರಕಾರಿ ಮತ್ತು ಹಣ್ಣು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪರಿಹಾರ ಇನ್ನೂ ಸಿಕ್ಕಿಲ್ಲ. ಬ್ಯಾಂಕ್ ಮತ್ತು ಖಾಸಗಿಯಾಗಿ ರೈತರು ಸಾಲ ಪಡೆದಿದ್ದು, ಕೊರೊನಾ ಸಂಕಷ್ಟದಲ್ಲೂ ರೈತರಿಗೆ ಸಾಲ ತೀರಿಸಲು ಒತ್ತಡ ಹಾಕಲಾಗುತ್ತಿದೆ. ರೈತರಿಗೆ ದಿಕ್ಕು ತೋಚದಂತಾಗಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ಬಗೆಹರಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
ತೋಟಗಾರಿಕೆ ಬೆಳೆ, ತೆಂಗು, ಅಡಿಕೆ, ಬಾಳೆ ಪರಿಹಾರ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರಿಗೆ ಹಣ ಬರುವುದು ವಿಳಂಬವಾಗುತ್ತಿದೆ. ತುರ್ತಾಗಿ ರೈತರ ಖಾತೆಗೆ ಹಣ ಜಮಾ ಮಾಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಕಬ್ಬಳ ಪ್ರಸಾದ್, ದೂಳೇರ ಗದ್ದಿಗೇಶ ಕರೇಕಟ್ಟೆ,ಎಂ. ಪರಶುರಾಮಪ್ಪ, ನಾಗರಕಟ್ಟೆ ಎನ್.ಟಿ.ಜಯನಾಯ್ಕ, ಆರ್.ಜಿ.ಬಸವರಾಜ್, ಆರ್. ಶಂಕರನಾಯ್ಕ, ಲಿಂಗರಾಜ ಪಾಮೇನಹಳ್ಳಿ ಇದ್ದರು.