ಹೊನ್ನಾಳಿ: ‘ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹೊರಗಿನ ಜಿಲ್ಲೆಯವರು ಎನ್ನುವ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ಗಮನಿಸಿ ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು’ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ‘ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಸಭೆ’ಯಲ್ಲಿ ಅವರು ಮಾತನಾಡಿದರು.
‘ಮೋದಿ ಪ್ರಧಾನಿಯಾಗಬೇಕು ಎನ್ನುವವರು, ಭೇಟಿ ನೀಡುವುದು ಮಾತ್ರ ಕಾಂಗ್ರೆಸ್ ಸಚಿವರ ಮನೆಗೆ, ಅಲ್ಲಿಂದ ಹೊರಗೆ ಬಂದು ತಮಗೆ ಟಿಕೆಟ್ ಕೇಳುವುದು ಸರಿಯೇ’ ಎಂದು ಪ್ರಶ್ನಿಸಿದರು.
‘ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ವಿದ್ಯಾಸಂಸ್ಥೆ ಮಾಡಿ ಜಿಲ್ಲೆಯವರೇ ಆಗಿದ್ದಾರೆ, ಜಿ.ಎಂ. ಸಿದ್ದೇಶ್ವರ ಹೊರಗಿನವರು ಎನ್ನುವ ನಿಮಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.
‘ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಗೊಂದಲ ಮೂಡಿಸುವವರಿಗೆ ಎಚ್ಚರಿಕೆ ನೀಡಿದ್ದು, ಇದೇ ಧೋರಣೆ ತಳೆದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಲೋಕಸಭಾ ಚುನಾವಣಾ ಉಸ್ತುವಾರಿ ಹನಗವಾಡಿ ವೀರೇಶ್ ಎಚ್ಚರಿಸಿದರು.
‘4 ಬಾರಿ ಸೋತರೂ ನಾನು ಹತಾಶೆಗೊಂಡಿಲ್ಲ. ಒಂದು ಚುನಾವಣೆಯಲ್ಲಿ ಸೋತ ನೀವು ಹತಾಶೆಯಿಂದ ಪಕ್ಷದ ನಾಯಕರ ವಿರುದ್ಧ ಆರೋಪಿಸುತ್ತಿರುವುದು ಸರಿಯಲ್ಲ’ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಟೀಕಿಸಿದರು.
‘168 ಹಳ್ಳಿಗಳಲ್ಲಿ ನಿಮ್ಮನ್ನು ಕೊಂಡಾಡಿದ್ದೆ, ನಾನೇ ಅವಳಿ ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ ತೆರಳಿ ನಿಮ್ಮ ದುರ್ವರ್ತನೆ ಬಗ್ಗೆ ಗುಣಗಾನ ಮಾಡಬೇಕಾಗುತ್ತದೆ’ ಎಂದು ತಾಲ್ಲೂಕು ಬಿಜೆಪಿ ಉಸ್ತುವಾರಿ ಶಾಂತ್ರಾಜ್ ಪಾಟೀಲ್ ಎಚ್ಚರಿಸಿದರು.
‘ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ಗೆ ಈಗಾಗಲೇ ಒಂದು ಕಾಲನ್ನು ಇರಿಸಿರುವ ವಿಚಾರ ಜಿಲ್ಲೆಯ ಜನರಿಗೆ ತಿಳಿದಿದೆ’ ಎಂದರು.
ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ, ‘ನಿಮ್ಮದು ಬ್ಲಾಕ್ಮೇಲ್ ರಾಜಕಾರಣ’ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ತಾಲ್ಲೂಕು ಬಿಜೆಪಿ ಮುಖಂಡರಾದ ಎ.ಜಿ.ಮಹೇಂದ್ರಗೌಡ, ಕೆ.ವಿ.ಚನ್ನಪ್ಪ, ಸಿ.ಕೆ.ರವಿ, ನೆಲಹೊನ್ನೆ ದೇವರಾಜ್, ಎಂ.ಯು. ನಟರಾಜ್, ಸಾಸ್ವೆಹಳ್ಳಿ ನರಸಿಂಹ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.