ಜಗಳೂರು: ತಾಲ್ಲೂಕಿನ ಮೆದಗಿನಕೆರೆ ಗ್ರಾಮದ ಬಡ, ಪರಿಶಿಷ್ಟ ಜಾತಿ ಕುಟುಂಬದ ವಿದ್ಯಾರ್ಥಿನಿಗೆ ಮೆರಿಟ್ ಆಧಾರದಲ್ಲಿ ಎಂಬಿಬಿಎಸ್ ಪದವಿಗೆ ಸರ್ಕಾರಿ ಸೀಟು ಸಿಕ್ಕಿದ್ದು, ವೈದ್ಯಕೀಯ ಶಿಕ್ಷಣದ ಖರ್ಚಿಗಾಗಿ ಶಾಸಕ ಎಸ್.ವಿ. ರಾಮಚಂದ್ರ ಅವರು ವಿದ್ಯಾರ್ಥಿನಿಗೆ ವೈಯಕ್ತಿಕವಾಗಿ ₹ 1 ಲಕ್ಷ ನೀಡಿದ್ದಾರೆ.
ಮೆದಗಿನಕೆರೆ ಗ್ರಾಮದ ಪರಿಶಿಷ್ಟ ಜಾತಿ ಕುಟುಂಬದ ಹನುಮಂತಪ್ಪ ಹಾಗೂ ನಾಗರತ್ನ ದಂಪತಿಯ ಪುತ್ರಿ ಅಕ್ಷತಾ ಅವರಿಗೆ ಮೆರಿಟ್ ಆಧಾರದಲ್ಲಿ ಎಂಬಿಬಿಎಸ್ ಕೋರ್ಸ್ಗೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕಿದೆ. ಬಡತನದಲ್ಲೂ ಶ್ರಮಪಟ್ಟು ಓದಿ ಉನ್ನತ ಶಿಕ್ಷಣಕ್ಕೆ ಅವಕಾಶ ಪಡೆದಿರುವ ವಿದ್ಯಾರ್ಥಿನಿಯ ಮನೆಗೆ ಶಾಸಕರು ಸೋಮವಾರ ಭೇಟಿ ನೀಡಿದ್ದರು.
ಶಾಸಕ ರಾಮಚಂದ್ರ ಮಾತನಾಡಿ, ‘ತೀವ್ರ ಬಡತನದಲ್ಲೂ ಅತ್ಯುನ್ನತ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿನಿ ಅಕ್ಷತಾ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಪ್ರಾರಂಭಿಕ ಹಂತದಲ್ಲಿ ₹ 1 ಲಕ್ಷ ಕೊಡುತ್ತಿದ್ದೇನೆ. ಮುಂದೆ ಅಗತ್ಯ ಬಿದ್ದಲ್ಲಿ ಹೆಚ್ಚಿನ ಸಹಾಯ ಮಾಡುತ್ತೇನೆ. ಬಡ ಕುಟುಂಬದ ಹೆಣ್ಣುಮಗಳನ್ನು ವೈದ್ಯೆಯನ್ನಾಗಿ ನೋಡಬೇಕು ಎಂಬ ಆಸೆ ಇದೆ. ಅಕ್ಷತಾ ಅವರ ಸಾಧನೆ ಗ್ರಾಮಿಣ ಭಾಗದ ಬಡ ಮಕ್ಕಳಿಗೆ ಸ್ಫೂರ್ತಿಯಾಗಲಿ’ ಎಂದು ಹೇಳಿದರು.
ವಿದ್ಯಾರ್ಥಿನಿಯ ಪೋಷಕರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಮುಖಂಡರಾದ ತುಪ್ಪದಹಳ್ಳಿ ಸಿದ್ದಪ್ಪ, ಕುಬೇಂದ್ರಪ್ಪ, ರವಿ ಇದ್ದರು.