ಬಸವಾಪಟ್ಟಣ: ಸಮೀಪದ ದಾಗಿನಕಟ್ಟೆಯ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಮಂಗಳವಾರ ಹೋಬಳಿಯ 30 ಜನ ಬಿ.ಎಲ್ಒ (ಬೂತ್ ಮಟ್ಟದ ಅಧಿಕಾರಿ)ಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಶಿಕ್ಷಕರು ಸಾಮೂಹಿಕವಾಗಿ ಬಹಿಷ್ಕರಿಸಿದರು.
ಶಿಕ್ಷಕರನ್ನು ಬಿಎಲ್ಒ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಶಾಲೆಯಲ್ಲಿ ಪಾಠ ಬೋಧನೆಗೆ ತೊಂದರೆಯಾಗಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಿಕ್ಷಕರ ಸಂಖ್ಯೆಯೂ ಕಡಿಮೆ ಇದೆ. ಪಠ್ಯಕ್ರಮ ಹಾಗೂ ಇಲಾಖೆ ಮಾರ್ಗದರ್ಶನಗಳ ಅನುಸಾರ ಪಾಠ ಮಾಡುವುದು ಕಷ್ಟವಾಗಿದೆ. ಶಾಲೆ ಬಿಟ್ಟು ಬಿಎಲ್ಒ ಕೆಲಸಕ್ಕೆ ಹೋಗುವುದರಿಂದ ಮಕ್ಕಳ ಪಾಲಕರು ನಮ್ಮ ಮೇಲೆ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಹಿರಿಯ ಶಿಕ್ಷಕ ಡಿ.ಕೆ. ರಾಜು ಹೇಳಿದರು.
‘ನಾವು ಶಾಲೆಯ ಕೆಲಸ ಕಾರ್ಯಗಳನ್ನು ಬಿಟ್ಟು ಮನೆ ಮನೆಗೆ ತೆರಳಿ ಈಗ ತಾನೆ ಜನಿಸಿದ ಮಗುವಿನಿಂದ ಹಿಡಿದು 18 ವರ್ಷ ವಯಸ್ಸಿನ ಯುವಕರವರೆಗಿನ ಮಾಹಿತಿಯನ್ನು ಪಡೆದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನೀಡಬೇಕಿದೆ. ಒಬ್ಬೊಬ್ಬ ಬಿಎಲ್ಒಗಳಿಗೆ 1,000 ದಿಂದ 1,500 ಜನರ ಗಣತಿಯ ಜವಾಬ್ದಾರಿ ನೀಡಿದ್ದು, ಈ ಕೆಲಸದ ಜತೆಗೆ ಶಾಲೆಗಳಲ್ಲಿ ಪಾಠ ಮಾಡುವುದು ಕಷ್ಟವಾಗುತ್ತಿದೆ. ಶಿಕ್ಷಕರನ್ನು ಬಿಎಲ್ಒ ಕೆಲಸದಿಂದ ಬಿಡುಗಡೆ ಮಾಡಬೇಕು’ ಎಂದು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ಆರ್. ಬಸಪ್ಪ ಒತ್ತಾಯಿಸಿದರು.
ಬಿಎಲ್ಒ ಕೆಲಸಕ್ಕೆ ನಿರುದ್ಯೋಗ ಪದವೀಧರರನ್ನು ನೇಮಿಸಿಕೊಳ್ಳಬೇಕು. ಇದರಿಂದ ಅವರಿಗೆ ಉದ್ಯೋಗ ದೊರೆಯುತ್ತದೆ ಮತ್ತು ಶಿಕ್ಷರಿಗೆ ಕೆಲಸದ ಹೊರೆ ಕಡಿಮೆಯಾಗಿ ಶಾಲೆಗಳಲ್ಲಿ ಪಾಠ ಮಾಡಲು ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಕರ ಸಂಘದ ನಿರ್ದೇಶಕ ಗುರುಮೂರ್ತಿ ಮತ್ತು ಶಿಕ್ಷಕ ಏಜಾಜ್ ಅಹಮ್ಮದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.