ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಪಾಪ್‌ಕಾರ್ನ್‌ ಮೆಕ್ಕೆಜೋಳಕ್ಕೆ ಗಿಳಿ ಹಿಂಡು ಕಾಟ

ಬೆಳಿಗ್ಗೆ–ಸಂಜೆ ಗಿಳಿ ಬೆದರಿಸಲು ಅನುಸರಿಸಿದ ಹಲವು ತಂತ್ರಗಳು ವಿಫಲ
Last Updated 11 ಸೆಪ್ಟೆಂಬರ್ 2022, 2:16 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡಿದ್ದ ಪಾಪ್‌ಕಾರ್ನ್ ಮೆಕ್ಕೆಜೋಳದ ತೆನೆ ಹೊರಹೊಮ್ಮಿವೆ. ಹಾಲುಗಾಳು ಹಂತದಲ್ಲಿರುವ ತೆನೆಗೆ ಹೋಬಳಿಯ ಬಹುತೇಕ ಹೊಲಗಳಿಗೆ ರಾಶಿ ರಾಶಿ ಗಿಳಿಗಳ ಹಿಂಡು ಲಗ್ಗೆ ಇಡುತ್ತಿವೆ.

ತೆನೆಯ ಮೇಲಿನ ಸಿಪ್ಪೆ ತೆಗೆದು ಕಾಳು ತಿನ್ನುತ್ತಿವೆ. ಗಿಳಿಗಳ ದಾಳಿ ನಿಯಂತ್ರಿಸಲು ರೈತರು ಪಡುತ್ತಿರುವ ಹರಸಾಹಸ ವ್ಯರ್ಥವಾಗುತ್ತಿದೆ.

‘ಬೆಳಿಗ್ಗೆ–ಸಂಜೆ ಗಿಳಿ ಬೆದರಿಸಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದೇವೆ. ಡಬ್ಬ ಬಡಿದು ಶಬ್ದ ಮಾಡಿ ಓಡಿಸಲು ಯತ್ನಿಸುತ್ತೇವೆ. ಧ್ವನಿವರ್ಧಕ ಬಳಸಿ ಓಡಿಸುತ್ತೇವೆ. ಈ ಕಡೆಯಿಂದ ಆ ಕಡೆಗೆ ಹೊಯ್ದಾಡಿಸುತ್ತವೆ. ಒಂದು ತೆನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಕಾಳುಗಳನ್ನು ತಿಂದಿವೆ. ತೆನೆಯ ಮೇಲಿನ ಗರಿ ಕೀಳುವ ಕಾರಣ ಉಳಿದ ಕಾಳುಗಳಿಗೆ ಫಂಗಸ್ ತಗುಲಿ ಕಪ್ಪಾಗುತ್ತಿವೆ’ ಎನ್ನುತ್ತಾರೆ ಗೆದ್ದಲಹಟ್ಟಿ ರೈತ ಹಾಲೇಶ್.

‘ಮೂರು ಎಕರೆಯಲ್ಲಿ ಬೆಳೆದಿದ್ದ ಪಾಪ್‌ಕಾರ್ನ್ ಮೆಕ್ಕೆಜೋಳ ಗಿಳಿಗಳ ದಾಳಿಯಿಂದ ಬಹುತೇಕ ನಾಶವಾಗಿದೆ. ಡಬ್ಬದ ಶಬ್ದದ ಜೊತೆ ಕೆಂಪು ಬಣ್ಣದ ಬ್ಯಾಟರಿ ಚಾಲಿತ ಲೈಟ್ ಬಳಸುತ್ತಿದ್ದೇವೆ. ಮುಂಚಿತ ಬಿತ್ತನೆ ನಡೆಸಿದರೆ ಗಿಳಿಗಳ ಸಮಸ್ಯೆಯಿಂದ ಬೆಳೆ ಉಳಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಬಂದಷ್ಟು ಬರಲಿ ಎಂದು ಕೈ ಚೆಲ್ಲಿದ್ದೇನೆ’ ಎನ್ನುತ್ತಾರೆ ಗ್ರಾಮದ ರೈತ ಓಂಕಾರಪ್ಪ.

‘ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯನ್ನು ನಾಲ್ಕು ಎಕರೆಯಲ್ಲಿ ಬಿತ್ತನೆ ಮಾಡಿದ್ದೆ. ಎರಡು ಎಕರೆ ಮಳೆ ಹೆಚ್ಚಾಗಿ ಕೊಳೆತು ಹೋಯಿತು. ಇನ್ನೆರಡು ಎಕರೆ ಬೆಳೆ ಬರುವ ಭರವಸೆ ಇತ್ತು. ಗಿಳಿಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಶೇ 50ರಷ್ಟು ಬೆಳೆ ಕೈಗೆ ಸಿಗುವುದೂ ಅನುಮಾನ. ಎಕರೆಗೆ ₹ 20 ಸಾವಿರ ಖರ್ಚು ಮಾಡಲಾಗಿತ್ತು’ ಎನ್ನುತ್ತಾರೆ ಚೆನ್ನಾಪುರದ ರೈತ ಕರಿಯಣ್ಣ.

ಜಿಲ್ಲೆಯಲ್ಲೇ ಸಂತೇಬೆನ್ನೂರು ಹೋಬಳಿ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಗೆ ಪ್ರಸಿದ್ಧಿ. ಈ ತಳಿ ರುಚಿಕರ. ಎಲ್ಲೆಡೆ ಬಹು ಬೇಡಿಕೆ ಪಡೆದ ಧಾನ್ಯ. ಉತ್ತಮ ಧಾರಣೆಯ ಭರವಸೆಯಲ್ಲಿ ರೈತರು ಮುಂಗಾರು ಪೂರ್ವ ಮಳೆಗೆ ಬಿತ್ತನೆ ನಡೆಸುತ್ತಾರೆ. ಒಂದು ದಶಕದಿಂದ ಈ ತಳಿಯ ಬೆಳೆ ವ್ಯಾಪ್ತಿ ಹೆಚ್ಚಾಗಿದೆ. ಕಳೆದ ವರ್ಷದಿಂದ ಗಿಳಿಗಳ ಕಾಟ ಈ ಬೆಳೆಗೆ ಶಾಪವಾಗಿ ಪರಿಣಮಿಸಿದೆ. ಈ ಬಾರಿ ಅತಿವೃಷ್ಟಿಯಿಂದ ಆರಂಭದಲ್ಲಿಯೇ ನೂರಾರು ಹೆಕ್ಟೇರ್ ಬೆಳೆ ನಾಶವಾಗಿದೆ. ಉಳಿದ ಬೆಳೆಗೆ ಗಿಳಿಗಳ ಕಾಟದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎನ್ನುತ್ತಾರೆ ವರ್ತಕ ಕೆ. ಸಿರಾಜ್ ಅಹಮದ್.

ಬೇರೆ ಆಹಾರ ಸಿಗದ ಕಾರಣ ಗಿಳಿಗಳ ದಾಳಿ

ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 2,500 ಎಕರೆಯಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆ ಇದೆ. ಉಳಿದಂತೆ ಸಾಂಪ್ರದಾಯಿಕ ದಪ್ಪ ಕಾಳಿನ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಈ ಬೆಳೆಗೆ ಗಿಳಿಗಳು ದಾಳಿ ಇಡುತ್ತಿಲ್ಲ. ಮುಂಚಿತ ಬಿತ್ತನೆ ಮಾಡಲಾದ ಕಾರಣ ಪಾಪ್‌ಕಾರ್ನ್ ಮೆಕ್ಕೆಜೋಳಕ್ಕೆ ಬೇಗನೆ ತೆನೆ ಬಂದಿವೆ. ಗಿಳಿಗಳಿಗೆ ಬೇರೆ ಆಹಾರ ಸಿಗದ ಕಾರಣ ಈ ಬೆಳೆಗೆ ಲಗ್ಗೆ ಇಡುತ್ತಿವೆ ಎಂದು ಕೃಷಿ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT