ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದ ಎದುರಿನ ನಿವೇಶನದಲ್ಲಿ ಧೂಡಾದಿಂದ ಸೈನಿಕರ ಉದ್ಯಾನ ನಿರ್ಮಿಸಲಾಗುವುದು ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ನಡೆದ ದಾವಣಗೆರೆ ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಸೈನಿಕರ ಭವನಕ್ಕೆ ₹ 75 ಲಕ್ಷ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ‘ಅಮರ್ ಜವಾನ್’ ಸ್ಮಾರಕ ನಿರ್ಮಾಣ ಮಾಡಲಾಗುವುದು. ಉದ್ಯಾನದ ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಒಳಗಡೆ ಒಂದು ಶೆಡ್ ನಿರ್ಮಿಸಿ ಸಭೆ, ಸಮಾರಂಭ ನಡೆಸಲು ಅನುಕೂಲ ಕಲ್ಪಿಸಲಾಗುವುದು’ ಎಂದು ಹೇಳಿದರು.
‘ಧೂಡಾ ಹಾಗೂ ಪಾಲಿಕೆ ಸಹಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದರು.
ನಗಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್,‘ಬಿಬಿಎಂಪಿಯಲ್ಲಿಮಾಜಿ ಸೈನಿಕರನ್ನು ಮಾರ್ಷಲ್ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ದಾವಣಗೆರೆ ಪಾಲಿಕೆಯಲ್ಲೂ ಮಾಜಿ ಸೈನಿಕರನ್ನು ನೇಮಕ ಮಾಡುವ ಸಂಬಂಧ ಚರ್ಚೆ ನಡೆಯುತ್ತಿದೆ. ನಗರಪಾಲಿಕೆಯಲ್ಲಿ ಯಾವುದಾದರೂ ಕೆಲಸಗಳಿದ್ದರೆ ಮಾಜಿ ಸೈನಿಕರಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮನೋಹರ್ ಮಹೇಂದ್ರಕರ್, ‘ಜಿಲ್ಲೆಯಲ್ಲಿ 2 ಸಾವಿರದಿಂದ 3 ಸಾವಿರ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಇದ್ದು, ದಾವಣಗೆರೆಯಲ್ಲಿ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಈ ಸಂಬಂಧ ಸಂಸದರು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರೂ ಕಾರ್ಯಗತಗೊಂಡಿಲ್ಲ’ ಎಂದು ದೂರಿದರು.
ಬೇತೂರು ಬಸವರಾಜಪ್ಪ, ‘ನಮ್ಮ ಪಟ್ಟಣಗಳಲ್ಲೇ ಯುವಕರಿಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆಯಾಗಬೇಕು’ ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಅಧ್ಯಕ್ಷ ರಾಮಚಂದ್ರ, ಖಜಾಂಚಿ ದಾಸಪ್ಪ, ಪ್ರಧಾನ ಕಾರ್ಯದರ್ಶಿ ಒ.ಬಿ. ಶಶಿಕಾಂತ್, ಸದಸ್ಯ ಪ್ರಮೋದ್ ಕುಮಾರ್ ಇದ್ದರು.