ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವೈಯಕ್ತಿಕ ಮಾನಹಾನಿ ಉಂಟು ಮಾಡಿ ಪ್ರಾಣ ಬೆದರಿಕೆ ಹಾಕಿರುವ ಕುರಿತಂತೆ ಇಲ್ಲಿನ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕಚೇರಿಗೆ ಪ್ರತಿನಿತ್ಯ ಬರುವ ಪತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಪತ್ರದಲ್ಲಿ ಸಿಎಂ ಹಾಗೂ ಡಿಸಿಎಂ ಅವರ ಬಗ್ಗೆ ವೈಯಕ್ತಿಕ ಮಾನಹಾನಿ ಮಾಡುವ ಕೆಟ್ಟ ಶಬ್ದಗಳ್ನು ಬಳಸಿ ಪ್ರಾಣ ಬೆದರಿಕೆಯನ್ನು ಹಾಕಲಾಗಿದೆ.
ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಾಗ ಅವರ ಸಲಹೆಯಂತೆ ಶಾಸಕರ ಆಪ್ತ ಸಹಾಯಕ ರವಿಕುಮಾರ್ ಬಿ.ಎನ್. ದೂರು ನೀಡಿದ್ದಾರೆ.
ಹಣದ ಆಮಿಷ: ₹6.15 ಲಕ್ಷ ವಂಚನೆ
ದಾವಣಗೆರೆ: ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಖಾಸಗಿ ಕಂಪನಿಯ ಉದ್ಯಗಿಯೊಬ್ಬರಿಗೆ ₹ 6.15 ಲಕ್ಷ ವಂಚಿಸಿದ್ದಾನೆ.
ಎಲ್ಬಿಎಸ್ ನಗರದ ಆರ್.ಎಂ.ಸಿ ರಸ್ತೆಯ ನಿವಾಸಿ ಶಿವಕುಮಾರ್ ಎಸ್.ಬಿ.ಹಣ ಕಳೆದುಕೊಂಡವರು.
ಗೂಗಲ್ ರಿವೀವ್ ರೇಟಿಂಗ್ ಏಜೆಂಟ್ ಎಂದು ಪರಿಚಯ ಮಾಡಿಕೊಂಡು ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಹಂತ ಹಂತವಾಗಿ ₹ 6.15 ಲಕ್ಷ ವಂಚಿಸಿದ್ದಾನೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.