ದಾವಣಗೆರೆ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಹಕ್ಕೊತ್ತಾಯ ಮಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿತು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶುರುವಾಗಿದೆ. ಈ ವಿಮಾನ ನಿಲ್ದಾಣಕ್ಕೆ ಜಗದ ಕವಿ, ಯುಗದ ಕವಿ, ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುಪ್ಪಳ್ಳಿಯ ಕುವೆಂಪು ಹೆಸರನ್ನು ನಾಮಕರಣ ಮಾಡಬೇಕು ಎಂದು ರಾಮೇಗೌಡ ಒತ್ತಾಯಿಸಿದರು.
ಮುಖಂಡರಾದ ಜಿ.ಎಸ್. ಸಂದೇಶ, ಹರೀಶ, ಬ್ಯಾಟರಿ ಜಬೀ, ಡಿ.ಮಲ್ಲಿಕಾರ್ಜುನ, ಬಸಮ್ಮ, ಪಿ.ಜೆ. ಶಾಂತಮ್ಮ, ಬಿ.ಮಂಜುಳಾ, ಎನ್.ನಾಗರಾಜ, ಸರೋಜ, ಖಾದರ್ ಬಾಷಾ, ಆರ್.ಕರಿಯಪ್ಪ, ರಫೀಕ್, ಬಸಮ್ಮ ಅವರೂ ಇದ್ದರು.