ಕಲಘಟಗಿ: ಖಾಸಗಿ ಗೊಬ್ಬರ ಮಳಿಗೆ ವ್ಯಾಪಾರಸ್ಥರು ನಿಗದಿತ ಬೆಲೆಗೆ ಗೊಬ್ಬರ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕ ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೆಗೌಡರ ಅವರಿಗೆ ಮನವಿ ಸಲ್ಲಿಸಿತು.
ರೈತರಿಗೆ ಈಗ ಬೇಸಿಗೆಯ ಹಂಗಾಮಿನ ನೀರಾವರಿ ಕೃಷಿ ಮಾಡಲು ಡಿಎಪಿ ಗೊಬ್ಬರದ ಅವಶ್ಯಕತೆಯಿದೆ, ಆದರೆ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಬಿತ್ತನೆ ಮಾಡಲು ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಕೆಲವೊಂದು ಖಾಸಗಿ ಗೊಬ್ಬರ ಮಳಿಗೆಯ ವ್ಯಾಪಾರಸ್ಥರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ನಿಗದಿತ ಬೆಲೆಗೆ ರೈತರಿಗೆ ಗೊಬ್ಬರ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕಟ್ಟೆಗೌಡರ, ನಿಗದಿತ ಬೆಲೆಯಲ್ಲಿ ಗೊಬ್ಬರ ಮಾರಾಟಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪ ಮಾದನಬಾವಿ, ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಉಳವಪ್ಪ ಬಳಿಗೇರ, ಸಿದ್ದಯ್ಯ ಕಟ್ನೂರಮಠ, ಸುರೇಶ್ ಮಂಜರ್ಗಿ, ಶಂಕರಗೌಡ ಪಾಟೀಲ, ಮಣ್ಣಪ್ಪ ಜಾಲಿಹಾಳ ಇದ್ದರು.