‘ಗರ್ಭಿಣಿಯರಲ್ಲಿ ಎಚ್ಐವಿ ಸೋಂಕು ಕಂಡು ಬಂದಾಗ ಅವರು ಔಷಧ ನಿರಂತರವಾಗಿ ತೆಗೆದುಕೊಳ್ಳುವಂತೆ ಫಾಲೊ ಅಪ್ ಮಾಡಲಾಗುತ್ತದೆ. ಅವರಿಗೆ ಸುರಕ್ಷಿತ ಹೆರಿಗೆ ಮಗು ಹುಟ್ಟಿದ ಕೂಡಲೇ ಔಷಧ ನೀಡುವುದು ಹಾಗೂ ಅದರ 18ನೇ ತಿಂಗಳವರೆಗೂ ಔಷಧ ತಪ್ಪಿಸದಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಈಚಿನ ದಿನಗಳಲ್ಲಿ ತಾಯಿಯಿಂದ ಮಗುವಿಗೆ ಎಚ್ಐವಿ ಹರಡಿದ ಒಂದೂ ಪ್ರಕರಣ ಇಲ್ಲ’ ಎಂದು ಕಿಮ್ಸ್ನಲ್ಲಿರುವ ಐಸಿಟಿಸಿ ಕೌನ್ಸೆಲರ್ ಸವಿತಾ ಹೊಸಕೋಟಿ ತಿಳಿಸಿದರು. ಗರ್ಭಿಣಿಯರಿಗೆ ಸೋಂಕು ಪತ್ತೆಯಾದಾಗ ಅವರ ಪತಿ ಅವರನ್ನು ಬಿಟ್ಟು ಹೋಗಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗ ಅವರನ್ನು ಕರೆಸಿ ಸಮಾಲೋಚನೆ ನಡೆಸಲಾಗುತ್ತದೆ. ತಾಯಿಯಿಂದ ಮಗುವಿಗೆ ಸೋಂಕು ಹರಡಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು. ಈಚೆಗೆ ಜನಜಾಗೃತಿ ಮೂಡಿರುವುದರಿಂದ ಎಚ್ಐವಿ ಸೋಂಕು ಕಂಡು ಬಂದರೂ ಕುಟುಂಬದವರು ಅವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎನ್ನುವುದೇ ಸಂತಸಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು. ಐಸಿಟಿಸಿ ಕೇಂದ್ರಗಳಿಂದ ಜಿಲ್ಲೆಯಾದ್ಯಂತ ತಿಂಗಳಿಗೆ ಕನಿಷ್ಠ ಒಂದಾದರೂ ರಕ್ತ ತಪಾಸಣಾ ಶಿಬಿರ ಹಮ್ಮಿಕೊಂಡು ಎಚ್ಐವಿ ತಪಾಸಣೆ ಮಾಡಲಾಗುತ್ತಿದೆ. ಇದರಿಂದ ಸಮುದಾಯದ ಮಟ್ಟದಲ್ಲಿ ಎಚ್ಐವಿ ಹರಡುವಿಕೆಯನ್ನು ತಡೆಯಲು ಪೂರ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಆನ್ಲೈನ್ ಸಭೆ
ಇಲ್ಲಿಯವರೆಗೆ 3ನೇ ಹಂತದ ಚಿಕಿತ್ಸೆ ಬಗ್ಗೆ ನಿರ್ಧಾರ ಮಾಡಲು ಸೋಂಕಿತರು ತಪಾಸಣೆಗಾಗಿ ಬೆಂಗಳೂರಿಗೇ ಹೋಗಬೇಕಿತ್ತು. ಕಳೆದ ಎರಡು ತಿಂಗಳಿನಿಂದ ಸೋಂಕಿತರ ರಕ್ತ ಪರೀಕ್ಷೆ ಇಲ್ಲಿಯೇ ಮಾಡಿಸಿ ವರದಿಯನ್ನು ಬೆಂಗಳೂರಿಗೆ ಮೊದಲೇ ಕಳುಹಿಸಲಾಗುತ್ತಿದೆ. ಸೋಂಕಿತರು ಇಲ್ಲಿಯ ವೈದ್ಯರು ಹಾಗೂ ಬೆಂಗಳೂರಿನ ವೈದ್ಯರು ಆನ್ಲೈನ್ ಸಭೆ ನಡೆಸಿ 3ನೇ ಹಂತದ ಚಿಕಿತ್ಸೆ ಬಗ್ಗೆ ನಿರ್ಧರಿಸುತ್ತಿದ್ದಾರೆ. ಇದರಿಂದ ಬೆಂಗಳೂರಿಗೆ ತಿರುಗಾಟ ಮಾಡುವುದು ಸ್ವಲ್ಪ ಮಟ್ಟಿಗೆ ತಪ್ಪಿದೆ. ಮುಂದೆ ಚಿಕಿತ್ಸೆಯೂ ಇಲ್ಲೇ ಲಭ್ಯವಾದರೆ ಸೋಂಕಿತರು ಪ್ರತಿ ತಿಂಗಳೂ ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ.
ಎಚ್ಐವಿ ಪೀಡಿತರಿಗೆ ಬರಬಹುದಾದ ಕಾಯಿಲೆಗಳು
‘ಎಚ್ಐವಿ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಏಡ್ಸ್ (ಅಕ್ವೈರ್ಡ್ ಇಮ್ಯುನೋ ಡೆಫಿಷಿಯನ್ಸಿ ಸಿಂಡ್ರೋಮ್) ಬರುವ ಸಾಧ್ಯತೆಗಳು ಇರುತ್ತವೆ. ಟ್ಯುಬರ್ಕ್ಯುಲೋಸಿಸ್ ಮೆನಿಂಜೈಟಿಸ್ ಕ್ರಿಪ್ಟೋಕೋಕೋಸ್ ಕ್ಯಾಂಡಿಡಯಾಸಿಸ್ ಟಾಕ್ಸೋ ಪ್ಲಾಸ್ಮೋಸಿಸ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ. ಆದರೆ ಎಚ್ಐವಿ ಸೋಂಕು ಇರುವ ಎಲ್ಲರಿಗೂ ಇದು ಬಂದೇ ಬಿಡುತ್ತದೆ ಎಂದಲ್ಲ. ಕೆಲವರು ಸೋಂಕು ಇದ್ದರೂ ಯಾವುದೇ ಲಕ್ಷಣಗಳೂ ಇಲ್ಲದೇ ಜೀವನವಿಡೀ ಆರಾಮವಾಗಿಯೂ ಇರಬಹುದು. ಹೀಗಾಗಿ ಭಯಪಡುವ ಅವಶ್ಯಕತೆ ಇಲ್ಲ’ ಎಂದು ಡಾ. ಬಿರಾದಾರ್ ತಿಳಿಸಿದರು.
ವಸತಿ ಯೋಜನೆಯಲ್ಲಿ ಆದ್ಯತೆ
ಜಿಲ್ಲೆಯಲ್ಲಿ ಏಡ್ಸ್ ಹಾಗೂ ಎಚ್ಐವಿ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕಾರ್ಯಕ್ರಮಗಳನ್ನು ವರ್ಷವಿಡೀ ನಿರಂತರವಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ರವೀಂದ್ರ ಬೋವೇರ್ ತಿಳಿಸಿದರು. ಎಚ್ಐವಿ ಸೋಂಕಿತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ವಸತಿ ಒದಗಿಸಲು ಆದ್ಯತೆ ನೀಡಲಾಗುತ್ತದೆ. ಎಚ್ಐವಿ ಪೀಡಿತ ಮಕ್ಕಳ ಪೋಷಣೆಗೆ ಮಕ್ಕಳ ರಕ್ಷಣಾ ಘಟಕಕವು ವಿಶೇಷ ಕಾಳಜಿ ವಹಿಸುತ್ತದೆ. ಕುಟುಂಬದ ಬೆಂಬಲ ದೊರಕಿದರೆ ಈ ರೋಗಿಗಳು ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಅವರು ವಿವರಿಸಿದರು.