ಹುಬ್ಬಳ್ಳಿ: ಮಾರುಕಟ್ಟೆಯ ತಂತ್ರಗಾರಿಕೆಯಲ್ಲಿ ಸಿಲುಕಿ ವೇಗವಾಗಿ ಫಸಲು ಸಿಗಬೇಕು, ಹೆಚ್ಚು ಹಣವನ್ನೂ ಗಳಿಸಬೇಕೆಂಬ ಆಸೆಯಿಂದ ರಾಸಾಯನಿಕ, ಕೀಟನಾಶಕಗಳನ್ನು ಯತೇಚ್ಛವಾಗಿ ಬಳಸುತ್ತಿದ್ದ ಬಹುತೇಕ ರೈತರು ಇದೀಗ ನೈಸರ್ಗಿಕ ವಿಧಾನವಾದ ಸಾವಯವ ಕೃಷಿ ಪದ್ಧತಿಯತ್ತ ಹೊರಳುತ್ತಿದ್ದಾರೆ. ತಮ್ಮ ಪ್ರಯತ್ನದ ಜೊತೆಜೊತೆಗೆ ಸರ್ಕಾರದ ಪ್ರೋತ್ಸಾಹವೂ ಸಿಕ್ಕರೆ, ‘ಸಾವಯವ ಕೃಷಿ ಕ್ರಾಂತಿ’ ಸಾಧ್ಯ ಎಂಬ ಅಭಿಪ್ರಾಯ ರೈತರದ್ದಾಗಿದೆ.
ಅತಿಯಾದ ರಸಗೊಬ್ಬರ, ಕೀಟನಾಶಕ ಮೊದಲಾದ ರಾಸಾಯನಿಕಗಳ ಬಳಕೆಯಿಂದ ಧಾರವಾಡ ಜಿಲ್ಲೆ ಸೇರಿದಂತೆ ದೇಶದಾದ್ಯಂತ ಕೃಷಿ ಭೂಮಿ ರೋಗಪೀಡಿತವಾಗಿದೆ. ಪರಿಣಾಮ ಭೂಮಿಯಲ್ಲಿ ಮೂಡುವ ಬೆಳೆಗಳು ವಿಷಮಯವಾಗಿದ್ದು, ಇಂತಹ ಆಹಾರ ಸೇವಿಸುವುದರಿಂದ ಸಾವಿರಾರು ರೋಗಗಳು ಬಾಧಿಸುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದು, ಜೀವಿತಾವಧಿ ಕಡಿಮೆಯಾಗುತ್ತಿರುವುದು, ಪ್ರಾಣಿಗಳ ಮಾರಣಹೋಮ, ಪರಿಸರ ಮಾಲಿನ್ಯ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಇದೇ ಕಾರಣ ಎಂಬುದು ತಜ್ಞರ ಅಭಿಮತ. ಇದು ಎಚ್ಚರಿಕೆಯ ಕರೆಗಂಟೆಯೂ ಹೌದು.
ಇಂತಹ ವಿಷಮ ಪರಿಸ್ಥಿತಿಯಿಂದ ಹೊರಬರಲು ಇರುವ ದಾರಿಗಳಲ್ಲಿ ಸಾವಯವ ಕೃಷಿ ಪದ್ಧತಿ ಪ್ರಮುಖವಾದದ್ದು. ಸತ್ವ ಕಳೆದುಕೊಂಡು ರೋಗದಿಂದ ಬಳಲುತ್ತಿರುವ ಭೂಮಿಗೆ ‘ಸಾವಯವ’ ಚಿಕಿತ್ಸೆ ನೀಡಿ, ಉಪಚಾರ ಮಾಡಬೇಕಿದೆ.
ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು, ಆರೋಗ್ಯಕರ ಕೃಷಿ ಚಟುವಟಿಕೆಗೆ ಪೂರವಾದ ಬೀಜೋಪಚಾರ, ಗೊಬ್ಬರ, ಕೀಟನಾಶಕ ತಯಾರಿಸಿ, ಅವುಗಳಿಂದ ಸತ್ವಯುತ ಬೆಳೆ ಬೆಳೆಯುವ ಕ್ರಮವಿದು. ಇದರಿಂದ ಭೂಮಿಯ ಫಲವತ್ತತೆ ಚಿರಕಾಲ ಉಳಿಯುತ್ತದೆ. ಇಲ್ಲಿ ಬೆಳೆದ ಉತ್ಪನ್ನಗಳ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಮ್ಮ ಆರೋಗ್ಯದೊಂದಿಗೆ ಭೂಮಿಯ ಆರೋಗ್ಯವೂ ವೃದ್ಧಿಸುತ್ತದೆ.
ಭೂಮಿಯನ್ನು ರೋಗಮುಕ್ತವಾಗಿಸಲು ಇತ್ತೀಚಿನ ವರ್ಷಗಳಲ್ಲಿ ಹಲವು ರೈತರು ಸಾವಯವ ಕೃಷಿಯ ಕಂಕಣ ತೊಟ್ಟಿದ್ದಾರೆ. ಆರಂಭದಲ್ಲಿ ಲಾಭ–ನಷ್ಟ ಲೆಕ್ಕಿಸದೆ, ದೀರ್ಘಕಾಲದ ಪ್ರಯೋಜನೆ ಪಡೆಯಲು ಇನ್ನೂ ಹೆಚ್ಚಿನ ರೈತರು ಉತ್ಸಾಹ ತೋರಬೇಕಿದೆ. ಅದಕ್ಕೆ ತಕ್ಕಂತೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳೂ ಸಿಗಬೇಕಿದೆ. ಅಗತ್ಯ ಜಾಗೃತಿ, ಯೋಜನೆ, ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆ ಮೊದಲಾದ ಸೌಕರ್ಯಗಳ ಬಗ್ಗೆ ಸರ್ಕಾರ ಯೋಚಿಸಬೇಕು, ಯೋಜಿಸಬೇಕು ಎಂದು ರೈತರು ಆಗ್ರಹಿಸುತ್ತಾರೆ.
‘ಹೆಚ್ಚು ಪ್ರಚಾರ ಅವಶ್ಯ’
ಅಳ್ನಾವರ: ‘ಹೆಚ್ಚಿನ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಮತ್ತಷ್ಟು ಪ್ರಚಾರ ಹಾಗೂ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರೈತರಲ್ಲಿ ಆಸಕ್ತಿ ಇದ್ದರೂ ಮಾಹಿತಿ ಕೊರತೆಯಿಂದ ಮನೆಗೆ ಬೇಕಾದಷ್ಟು ಮಾತ್ರ ಬೆಳೆ ಬೆಳೆಯುತ್ತಿದ್ದಾರೆ’ ಎಂದು ಕುಂಬಾರಕೊಪ್ಪ ಗ್ರಾಮದ ರೈತ ಅಶೋಕ ಜೋಡಟ್ಟಿಯವರ ಹೇಳಿದರು.
ಪೂರಕ ಮಾಹಿತಿ: ರಾಜಶೇಖರ ಸುಣಗಾರ, ರಮೇಶ ಓರಣಕರ, ಬಸನಗೌಡ ಪಾಟೀಲ
ಅಂಕಿ–ಅಂಶ 43 21–22ನೇ ಸಾಲಿನಲ್ಲಿ ಸಾವಯವ ಕೃಷಿ ಪ್ರಮಾಣಪತ್ರ ಪಡೆದ ರೈತರು 21 22–23 ನೇ ಸಾಲಿನಲ್ಲಿ ಪ್ರಮಾಣಪತ್ರ ಪಡೆದ ರೈತರು
ಮಣ್ಣಿನ ಗುಣಮಟ್ಟ ಕಾಪಾಡಲು ಸಾವಯವ ಕೃಷಿ ಸಹಕಾರಿಯಾಗಿದೆ. ದರ ಮತ್ತು ಇಳುವರಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಈ ಪದ್ಧತಿಗೆ ಒತ್ತು ನೀಡುತ್ತಿದ್ದೇನೆಮೈಲಾರಪ್ಪ ಗುಡ್ಡಪ್ಪನವರ ರೈತ ಕುರುಬಗಟ್ಟಿ (ಉಪ್ಪಿನಬೆಟಗೇರಿ)
ಸಾವಯವ ವಿಧಾನದಲ್ಲಿ ಮೆಣಸಿನಕಾಯಿ ಶೇಂಗಾ ಬೆಳೆದಿದ್ದೇನೆ. ಕೃಷಿಗೆ ಬೇಕಾದ ಸಾವಯವ ಅಂಶಗಳನ್ನು ಮನೆಯಲ್ಲೇ ತಯಾರಿಸುತ್ತೇನೆಬಸವರಾಜ ಗಾಣಿಗೇರ ರೈತ ಹಿರೇಹರಕುಣಿ (ಕುಂದಗೋಳ)
ಸರ್ಕಾರದಿಂದ ಅಗತ್ಯ ನೆರವು ಸಿಕ್ಕರೆ ಅನುಕೂಲವಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಲು ಸೆಗಣಿ ಗೊಬ್ಬರ ಆಕಳು ಗಂಜಲು ಬಳಸುತ್ತಿರುವೆಷಣ್ಮುಖ ಅಂಗಡಿ ರೈತ ತರ್ಲಘಟ್ಟ (ಕುಂದಗೋಳ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.