ಧಾರವಾಡ: ದೆಹಲಿಯ ಚಾಂದಿನಿ ಚೌಕ್ನಲ್ಲಿ ದುಷ್ಕರ್ಮಿಗಳು ಮಂದಿರ ಧ್ವಂಸ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಕಳೆದ ಕೆಲವು ವರ್ಷಗಳಲ್ಲಿ ಪ್ರತ್ಯೇಕವಾದಿ ಮಾನಸಿಕತೆಯಿಂದ ನಡೆಯುತ್ತಿರುವ ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ದೇಶ ವಿರೋಧಿ, ಹಿಂದೂ ವಿರೋಧಿ ಚಟುವಟಿಕೆಗಳ ಕಾರಣದಿಂದ ದೇಶದಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೆಂದ್ರಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇವೆ. ಈ ಎಲ್ಲ ಚಟುವಟಿಕೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಕುಶ ಹಾಕಬೇಕು ಎಂದು ಆಗ್ರಹಿಸಿದರು.
ಜಿಹಾದಿಗಳ ದುರ್ವ್ಯಹಾರಗಳು ಸಂಪೂರ್ಣ ಭಾರತವನ್ನು ಚಿಂತೆಗೀಡು ಮಾಡಿದೆ. ಇವರ ಭಯೋತ್ಪಾದನೆ ಹಿಂದೂಗಳ ಬಲವಂತದ ಮತಾಂತರ ಹಾಗೂ ಹಿಂದೂಗಳ ಪಲಾಯನದ ವಿಷಯಗಳಿಂದಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ, ಕೇರಳ, ಬಂಗಾಳ ಮತ್ತು ಕರ್ನಾಟಕದಲ್ಲಿ ಹಿಂದೂಗಳ ಮೇಲೆ ಸತತ ಆಕ್ರಮಣಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಧಾರವಾಡ ಜಿಲ್ಲಾ ಘಟಕದ ಸಂಚಾಲಕ ಶಿವಾನಂದ ಸತ್ತಿಗೇರಿ, ಎಸ್.ಎಚ್. ಪಾಟೀಲ, ಲಕ್ಷ್ಮಣ ಹೂಗಾರ, ಅಕ್ಷಯ ಕುಲಕರ್ಣಿ, ಮಹಾದೇವ ಕೋರಿ, ಪ್ರಿತೇಶ ಜಾಧವ, ಮಹಾಬಲೇಶ್ವರ ಹೆಗಡೆ, ಗುರುಶಾಂತಯ್ಯ ಹಿರೇಮಠ ಇದ್ದರು.