ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನವೊಲಿಕೆ ಹಿನ್ನಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಎಚ್.ವಿಶ್ವನಾಥ್ ಎರಡು, ಮೂರು ದಿನದಲ್ಲಿ ವಾಪಸ್ ಪಡೆಯಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಶ್ವನಾಥ್ ಅವರು ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ದರು. ಬುಧವಾರ ನಡೆದ ಜೆಡಿಎಲ್ಪಿ ಸಭೆಯಲ್ಲಿ ಶಾಸಕರು, ಸಚಿವರು ಅವರೊಂದಿಗೆ ಚರ್ಚಿಸಿದ್ದಾರೆ. ಶೀಘ್ರ ರಾಜೀನಾಮೆ ವಾಪಸ್ ಪಡೆಯಲಿದ್ದು, ಅವರ ಮಾರ್ಗದರ್ಶನದಲ್ಲಿಯೇ ಪಕ್ಷ ಕಟ್ಟುತ್ತೇವೆ ಎಂದರು.
‘ನನ್ನ ರಾಜೀನಾಮೆ ವಿಚಾರವನ್ನು ಈಗಲೂ ದೇವೇಗೌಡರ ಮುಂದೆ ಇಟ್ಟಿದ್ದೇನೆ. ಮುಖಂಡರು, ಕಾರ್ಯಕರ್ತರ ಜತೆ ಗೌಡರು ಚರ್ಚಿಸಿದ್ದಾರೆ. ಇದೇ 17 ಅಥವಾ 18ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವೆ. ದೇವೇಗೌಡರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದರು.