ಹಾಸನ: ಶ್ರೀಮಂತರನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದ ಜಾಲವನ್ನು ಜಿಲ್ಲೆಯ ಪೊಲೀಸರು ಭೇದಿಸಿದ್ದು, ಗುಪ್ತಚರ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಶಾಸಕ ಎಚ್.ಡಿ. ರೇವಣ್ಣ ಅವರ ಆಪ್ತ ಗುತ್ತಿಗೆದಾರ ಅಶ್ವತ್ಥ ನಾರಾಯಣಗೌಡ ಅವರ ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಪತ್ತೆ ಹೆಚ್ಚಿದ್ದಾರೆ.
ಬೆಂಗಳೂರಿನ ಸತೀಶ್, ಮುರುಗನ್, ಮಧುಸೂದನ್, ಅಶೋಕ್, ಚನ್ನರಾಯಪಟ್ಟಣದ ತೇಜಸ್ವಿ, ಅರವಿಂದ್ ಎಂಬುವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳಾದ ರೋಹಿತ್, ಪ್ರವೀಣ್ ಬಂಧನಕ್ಕಾಗಿ ಶೋಧ ಮುಂದುವರಿದಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದರು.
ಆರೋಪಿಗಳಿಂದ 3 ಕಾರು, 8 ಮೊಬೈಲ್ ಫೋನ್, ಒಂದು ಮಚ್ಚು, ಕಬ್ಬಿಣದ ಲಾಂಗ್, ಕಬ್ಬಿಣದ ರಾಡ್ ವಶಕ್ಕೆ ಪಡೆಯಲಾಗಿದೆ ಎಂದರು.
ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ, ಕೋಲಾರ ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಅಶೋಕ್ ಎಂಬುವವರನ್ನು ಬಂಧಿಸಲಾಗಿದೆ. ಲೋಹಿತ್ ಕುಮಾರ್ ಹಾಗೂ ಪ್ರವೀಣ್ ಎಂಬುವವರು 2020ರಲ್ಲಿ ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಅವರನ್ನು ಅಪಹರಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆದರೆ ಅಶ್ವತ್ಥ ನಾರಾಯಣಗೌಡ ಪ್ರಕರಣದಲ್ಲಿ ರಾಜಕೀಯ ಹಿನ್ನೆಲೆ ಇಲ್ಲ ಎಂದು ಸ್ಪಷ್ಟಪಡಿಸಿದರು.
‘ಈ ತಂಡ ಬೇರೆ ಪ್ರಕರಣದಲ್ಲಿಯೂ ಭಾಗಿಯಾಗಿದೆಯೇ? ಈ ಹಿಂದೆ ಯಾವೆಲ್ಲ ಕೃತ್ಯಗಳಲ್ಲಿ ಆರೋಪಿಗಳು ಶಾಮೀಲಾಗಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತದೆ’ ಎಂದು ಹೇಳಿದರು.
ಪ್ರಕರಣ ಹಿನ್ನೆಲೆ:
ಅ.10ರಂದು ರಾತ್ರಿ 8.20ರ ಸಮಯದಲ್ಲಿ ಗುತ್ತಿಗೆದಾರ ಅಶ್ವತ್ ನಾರಾಯಣಗೌಡ ಅವರ ಕಾರನ್ನು ಅಡ್ಡಗಟ್ಟಿದ 5 ಮಂದಿಯ ತಂಡ ಹಲ್ಲೆಗೆ ಯತ್ನಿಸಿತ್ತು. ಈ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಗೆ ಇಬ್ಬರು ಎಎಸ್ಪಿ, ಇಬ್ಬರು ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್, ಎಂಟು ಮಂದಿ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.