ಹಾಸನ: ಕೋವಿಡ್ ಕುರಿತು ಜನರಿಗೆ ತಪ್ಪು ತಿಳುವಳಿಕೆಗಳನ್ನು ದೂರ ಮಾಡಬೇಕಿದೆ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರನಾಯಕ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಬಾಲ ವಿಜ್ಞಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಕುರಿತು ಅವೈಜ್ಞಾನಿಕತೆ ತಾಂಡವಾಡುತ್ತಿದೆ. ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚವನ್ ಪ್ರಾಶ್, ಸಕ್ಕರೆ ಗುಳಿಗೆ, ಕಷಾಯ ಸೇವಿಸುವಂತೆ ಸಲಹೆ ನೀಡುತ್ತಿದೆ. ಆದರೆ, ಈ ರೀತಿ ಹೇಳುವ ಇಲಾಖೆಯ ಮುಖ್ಯಸ್ಥನಿಗೆ ಸೋಂಕು ತಗುಲಿದರೆ ಆತ ಆಸ್ಪತ್ರೆಗೆ ದಾಖಲಾಗುತ್ತಾನೆ ಎಂದರು.
ಕೋವಿಡ್ ವಿಚಾರ ಮುಂದಿಟ್ಟುಕೊಂಡು ಅನೇಕರು ಹಣ ಮಾಡುತ್ತಿದ್ದಾರೆ ಹಾಗೂ ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಬಸ್ ನಿಲ್ದಾಣಗಳ ಚಹಾ ಅಂಗಡಿಗಳಲ್ಲಿಯೂ ರೋಗ ನಿರೋಧಕ ಟೀ ಎಂಬ ಫಲಕ ಹಾಕಲಾಗಿದೆ. ಶೇಕಡಾ 80ರಷ್ಟು ಜನರಿಗೆ ಕೋವಿಡ್ ತಾನಾಗಿಯೇ ಗುಣಮುಖವಾಗಿದೆ ಎಂದು ಹೇಳಿದರು.
ಕೋವಿಡ್ನಿಂದ ದೂರವಿರಲು ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಹಾಗೂ ಅಂತರ ಪಾಲನೆ ಮಾಡಬೇಕು. ಸೋಂಕಿನ ಕುರಿತು ವಾಟ್ಸ್ ಆ್ಯಪ್ಗಳಲ್ಲಿ ಬರುವ ಸಂದೇಶಗಳನ್ನು ನಂಬಬಾರದು. ಸೋಂಕು ನಿಯಂತ್ರಣಕ್ಕೆ ಬಾರದಿರುವುದಕ್ಕೆ ಪ್ರಮುಖ ಕಾರಣ ಶೇಕಡಾ 80 ರಷ್ಟು ಜನರಿಗೆ ರೋಗದ ಲಕ್ಷಣಗಳು ಇಲ್ಲದಿರುವುದು ಎಂದು ಅಭಿಪ್ರಾಯಪಟ್ಟರು.
ಲೇಖಕ ಲೋಕೇಶ್ ಮಾತನಾಡಿ, ಕಾಡಿನಿಂದ ಕಾಯಿಲೆಗಳು ಬರುತ್ತಿವೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಅರಣ್ಯ ಸಂಪತ್ತನ್ನು ಸಾಕಷ್ಟು ನಾಶ ಮಾಡಿದ್ದೇವೆ. ಅಮೆಜಾನ್ ಕಾಡು ಶೇಕಡಾ 50 ರಷ್ಟು ಮಾತ್ರವೇ ಉಳಿದಿದೆ. ಮುಂದೆ ಇನ್ನೇನೂ ಆತಂಕಗಳು ಕಾದಿವೆಯೋ ಗೊತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬಾಲ ವಿಜ್ಞಾನ ಪತ್ರಿಕೆಯ ಅಂಕಣಕಾರರು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್. ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪ ನಿರ್ದೇಶಕ ಡಿ.ಟಿ.ಪುಟ್ಟರಾಜು, ಸಿ.ಕೃಷ್ಣೇಗೌಡ, ಖಜಾಂಚಿ ಸಿ.ಕೃಷ್ಣೇಗೌಡ, ಈ.ಬಸವರಾಜು, ಟಿ.ಜಿ. ಕೃಷ್ಣಮೂರ್ತಿ ರಾಜ್ ಅರಸ್ ಇದ್ದರು.