ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಯಲ್ಲಿ ಲೋಪವಾಗಿ ಗೋಲಿಬಾರ್‌ ಆದ್ರೆ ಡಿಸಿ ಹೊಣೆ’

ಆಯೋಗ ಅನುಮತಿ ನೀಡದಿದ್ದರೆ ಹೇಗೆ ಸಭೆ ನಡೆಸುವುದು: ರೇವಣ್ಣ ಪ್ರಶ್ನೆ
Last Updated 8 ಮೇ 2019, 11:43 IST
ಅಕ್ಷರ ಗಾತ್ರ

ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ವಿತರಣೆ ವ್ಯವಸ್ಥೆಯಲ್ಲಿ ಲೋಪ ಉಂಟಾಗಿ, ಗೋಲಿಬಾರ್‌ ಆದ್ರೆ ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರೇ ಹೊಣೆ ಎಂದು ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.

‘ಚುನಾವಣೆ ಮುಗಿದ ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿಗಾಗಿ ಸರ್ಕಾರ ಜಿಲ್ಲೆಗೆ ₹8 ಕೋಟಿ ಬಿಡುಗಡೆ ಮಾಡಿದೆ. ₹ 5 ಕೋಟಿ ಕುಡಿಯುವ ನೀರಿಗೆ ನೀಡಿದೆ. ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ. ಹಿಂದಿನ ಡಿ.ಸಿ ನಡೆಸಿರುವ ಸಭೆಯನ್ನು ನೋಡಿಕೆಲಸ ಮಾಡಲಿ. ಕೆಲಸ ಮಾಡಲು ಆಗದಿದ್ದರೆ ರಜೆ ಹಾಕಿ ಹೋಗಲಿ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ ವಿರುದ್ಧ ಮತ್ತೆ ಗುಡುಗಿದರು.

‘ಬರ ಪರಿಹಾರ ಕಾಮಗಾರಿ ಪರಿಶೀಲನಾ ಸಭೆ ನಡೆಸಲು ನೀತಿ ಸಂಹಿತೆ ಸಡಿಲಿಸಿದ್ದರೆ ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಸ್ಪಷ್ಟ ಸೂಚನೆ ನೀಡಬೇಕು. ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡುವಂತೆ ಬಿಜೆಪಿಯವರು ಟೀಕಿಸುತ್ತಾರೆ.ಮತ್ತೊಂದು ಕಡೆ ನೀತಿ ಸಂಹಿತೆ ಮುಗಿಯವವರೆಗೂ ಸಭೆ ನಡೆಸಲು ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತಾರೆ. ಆಯೋಗ ಅನುಮತಿ ನೀಡದಿದ್ದರೆ ಸಭೆ ನಡೆಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ದೇವೇಗೌಡರ ಕುಟುಂಬದವರು ಟೆಂಪಲ್‌ ರನ್‌ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡಬಾರದು ಎಂಬ ನಿಯಮ ಇದೆಯೇ? ಪ್ರಧಾನಿ ನರೇಂದ್ರ ಮೋದಿ ಅವರೇ ಹತ್ತತ್ತು ಪೂಜಾರಿಗಳನ್ನು ಇಟ್ಟುಕೊಂಡು ಪೂಜೆ ಮಾಡುವುದನ್ನು ಟಿ.ವಿಗಳಲ್ಲಿ ತೋರಿಸಲಿಲ್ಲವೇ ಎಂದು ಜಗದೀಶ್‌ ಶೆಟ್ಟರ್‌ ಆರೋಪಕ್ಕೆ ತಿರುಗೇಟು ನೀಡಿದರು.

‘ಯಾವ ವಿಚಾರಕ್ಕೆ ಗೋಲಿಬಾರ್‌ ವಿಷಯ ಪ್ರಸ್ತಾಪಿಸಿದ್ದರೆ ಗೊತ್ತಿಲ್ಲ’

ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪ್ರಿಯಾಂಕ, ‘ರೈತರ ಯಾವುದೇ ಕೆಲಸ ಬಾಕಿ ಉಳಿದಿದ್ದರೂ ಮಾಡಿಕೊಡಲಾಗುವುದು. ಬರ ಪರಿಹಾರ ಕುರಿತು ವಾರಕ್ಕೊಮ್ಮೆ ಟಾಸ್ಕ್‌ಫೋರ್ಸ್‌ ಸಭೆ ನಡೆಸಲಾಗುತ್ತಿದೆ. ಆಲೂಗಡ್ಡೆ ದರ ನಿರ್ಧಾರ ಕುರಿತು ರೈತರ ಸಭೆ ನಡೆಸಲಾಗಿದೆ. ಬರ ವಿಚಾರಕ್ಕೂ ನೀತಿ ಸಂಹಿತೆಗೂ ಸಂಬಂಧವಿಲ್ಲ. ಯಾವ ವಿಚಾರಕ್ಕೆ ಗೋಲಿಬಾರ್‌ ವಿಷಯ ಪ್ರಸ್ತಾಪಿಸಿದ್ದರೆ ಗೊತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT