ಮಾಂಡಸ್ ಪ್ರಭಾವ: ಹಾಸನ ಜಿಲ್ಲೆಯಲ್ಲಿ ಮಳೆ, ಚಳಿ

ಹಾಸನ: ಮಾಂಡಸ್ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶನಿವಾರ ರಾತ್ರಿಯಿಡೀ ಮಳೆ ಸುರಿದಿದ್ದು, ಭಾನುವಾರ ಬೆಳಿಗ್ಗೆಯಿಂದಲೂ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಚಳಿಯು ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು, ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ, ಬೇಲೂರು, ಹಾಸನ ಸೇರಿದಂತೆ ಬಹುತೇಕ ಎಲ್ಲ ತಾಲ್ಲೂಕುಗಳಲ್ಲೂ ಮಳೆಯ ಸುರಿಯುತ್ತಿದೆ.
ಭಾನುವಾರ ಆಗಿರುವುದರಿಂದ ಸರ್ಕಾರಿ, ಖಾಸಗಿ ಉದ್ಯೋಗಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರಬಂದಿಲ್ಲ. ಆದರೆ, ಮನೆಯಲ್ಲೂ ವಿಪರೀತ ಚಳಿ ಇದ್ದು, ಉಷ್ಣಾಂಶ ಗಣನೀಯವಾಗಿ ಕುಸಿದಿದೆ. ಇನ್ನೂ ಎರಡು ದಿನ ಇದೇ ರೀತಿ ಮಳೆ ಮುಂದುವರಿದಲ್ಲಿ ಕಾಫಿ, ಜೋಳ, ರಾಗಿ ಸೇರಿದಂತೆ ಇತರೆ ದ್ವಿದಳ ಧಾನ್ಯಗಳಿಗೆ ಮಾರಕ ಆಗಬಹುದು ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ಮದುವೆ, ಬೀಗರ ಔತಣ, ಶುಭ ಸಮಾರಂಭಗಳು ಈಗಷ್ಟೇ ಆರಂಭವಾಗಿದ್ದು, ಈ ಕಾರ್ಯಕ್ರಮಗಳಿಗೆ ತೆರಳುವ ಜನರಿಗೂ ಮಳೆಯಿಂದ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಕಾಮಗಾರಿಗಳಿಗೂ ತೊಡಕಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.