ಹಳೇಬೀಡು: ಬೆಳಗಾವಿಯ ಅನಗೋಳದಿಂದ ವಲಸೆ ಬಂದ ನಿರಾಶ್ರಿತ ಜೈನ ಕುಟುಂಬವೊಂದು ಬೇಲೂರು ತಾಲ್ಲೂಕಿನ ಮೂಳೆನಳ್ಳಿ ಬಳಿ ಮಳೆ, ಗಾಳಿ ತಡೆಯಲಾರದಂತಹ ಶೆಡ್ನಲ್ಲಿ ವಾಸವಾಗಿರುವುದನ್ನು ಗಮನಿಸಿದ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದಾರೆ. ಶಾಸಕ ಕೆ.ಎಸ್.ಲಿಂಗೇಶ್ ಹಳೇಬೀಡಿಗೆ ಕರೆತಂದು ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಜಮೀನಿನಲ್ಲಿ ಜೀವನಕ್ಕೆ ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಜೀವನ ನಿರ್ವಹಣೆಗಾಗಿ ಚಿಂತಿಸುತ್ತಿದ್ದ ಜೈನ ನಿರಾಶ್ರಿತರಿಗೆ ಶಾಸಕರು ಹಾಸನ ಜಿಲ್ಲೆಯ ಜೈನ ಸಮಾಜ ಸಮಾಜದವರ ಸಹಕಾರದೊಂದಿಗೆ ವಸತಿ ಹಾಗೂ ಜೀವನೋಪಾಯದ ವ್ಯವಸ್ಥೆ ಮಾಡಿದ್ದಾರೆ. ದುಃಖಿತರಾಗಿದ್ದ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.
ನಿರಾಶ್ರಿತರಾದ ಹಿನ್ನೆಲೆ: ಚಂದ್ರಕಾಂತ, ಪತ್ನಿ ಮೂವರು ಮಕ್ಕಳೊಂದಿಗೆ ಬೇಕರಿ ಕೆಲಸ ಮಾಡುತ್ತಾ ಸುಖವಾಗಿಯೇ ಇದ್ದರು. ಕಾಲಕ್ರಮೇಣ ಕಷ್ಟಗಳು ಎದುರಾದವು. ಕೆಲಸ ಕೊಡಿಸುತ್ತೇವೆ ಎಂದು ಹಾಸನಕ್ಕೆ ಕರೆ ತಂದವರು ಕೈಬಿಟ್ಟು ಹೋದರು. ಊರಿಂದ ಊರಿಗೆ ಈ ಕುಟುಂಬ ಅಲೆದಾಡಿತು. ಮೂಳೆನಳ್ಳಿ ಬಳಿ ಬಂದು ನೆಲೆಸಿದಾಗ ಗ್ರಾಮಸ್ಥರ ನೀಡಿದ ಸುಳಿವಿನ ಪ್ರಕಾರ ಸದ್ಯ ಹಳೇಬೀಡಿನ ಬಸ್ತಿಗಹಳ್ಳಿಯಲ್ಲಿರುವ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಸೇರಿದ ಜಮೀನಿನಲ್ಲಿ ನೆಲೆಸಲು ಅವಕಾಶ ಮಾಡಲಾಗಿದೆ.
ಕುಟುಂಬ ನಿರ್ವಹಣೆಗೆ ಅಗತ್ಯವಿರುವ ಅಡುಗೆ ಅನಿಲ, ದಿನಸಿ ಸಾಮಗ್ರಿ, ಸ್ಟೌ, ಪಾತ್ರೆ, ಹಾಸಿಗೆ ಸೇರಿದಂತೆ ಅಗತ್ಯ ವಸ್ತು ಕೊಡಿಸಿದ್ದಾರೆ. ಜೈನರಗುತ್ತಿ ಸಮಿತಿಯವರಿಗೆ ನಿರಾಶ್ರಿತ ಕುಟುಂಬ ಅಲೆದಾಡದಂತೆ ನೋಡಿಕೊಳ್ಳಲು ಶಾಸಕರು ಸೂಚಿಸಿದ್ದಾರೆ.
ಶಾಸಕರ ಜೊತೆಯಲ್ಲಿ ಬಸ್ತಿಹಳ್ಳಿ ಮಲ್ಲಿಕಾರ್ಜುನ, ಭೈರೇಗೌಡ, ಜೈನರ ಗುತ್ತಿ ಟ್ರಸ್ಟ್ ಅಧ್ಯಕ್ಷ ಹೊಂಗೇರೆ ದೇವೇಂದ್ರ ಹಾಗೂ ಸದಸ್ಯರು ಸೇರಿ ಒಂದು ತಿಂಗಳು ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.
ಶಾಸಕರ ಹಾಗೂ ಜನರ ಸಹಕಾರ ಎಲ್ಲರ ಮೆಚ್ಚುಗೆಗೆ ಪಾತ್ರವೆನಿಸಿದೆ.