ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದೆ ಎಂದು ವೀಕ್ಷಕ ಡಾ.ಸಂಜಯ್ ಗೌಡ ಭಾಷಣ ಮಾಡುತ್ತಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ‘ತಾಲ್ಲೂಕಿನಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಚೆನ್ನಾಗಿದೆ. ಆದರೆ, ದೇವೇಗೌಡರ ಸಖ್ಯ ಮಾಡಿದರೆ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲು ಹೇಗೆ ಸಾಧ್ಯ. ವೀಕ್ಷಕರು ಪಕ್ಷದ ಸಭೆ ಮಾಡ್ತೀರ ನಂತರ ಹೊರಟು ಹೋಗ್ತೀರಾ. ಕಾರ್ಯಕರ್ತರ ಭಾವನೆಯನ್ನು ವರಿಷ್ಠರಿಗೆ ಮುಟ್ಟಿಸುವುದಿಲ್ಲ. ರಾಜ್ಯದ ವರಿಷ್ಠರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಲು ಹೋದರೆ ಹಾಸನ ಜಿಲ್ಲೆಯ ವಿಚಾರ ಬಿಟ್ಟು ಬೇರೆ ವಿಷಯ ಚರ್ಚಿಸಿ ಎನ್ನುತ್ತಾರೆ. ಈ ರೀತಿಯಾದರೆ ಕಾರ್ಯಕರ್ತರ ಪಾಡು ಏನು? ಪಕ್ಷದ ಆಧಾರ ಸ್ತಂಭವಾದ ಕಾರ್ಯಕರ್ತರನ್ನು ದಿಕ್ಕು ತಪ್ಪಿಸಬೇಡಿ’ ಎಂದು ಖಾರವಾಗಿ ಹೇಳಿದರು.