ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಕಲಗೂಡು | ಸಂರಕ್ಷಿತ ಅರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಗಿತ: ಮಹದೇವ್

Published 31 ಮೇ 2024, 14:15 IST
Last Updated 31 ಮೇ 2024, 14:15 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಮುದಗನೂರು ಕಾವಲ್ ಮತ್ತು ಅರಸೀಕಟ್ಟೆ ಕಾವಲ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿರುವುದಾಗಿ ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ಮಹದೇವ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಬಾರದು ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಹಾಗೂ ಹಿರಿಯ ಅಧಿಕಾರಿಗಳ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ಕ್ರಷರ್‌ಗಳನ್ನು ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂದ್ ಮಾಡಿಸಿದ್ದು, ಯಾವುದೇ ಚಟುವಟಿಕೆ ನಡೆಸದಂತೆ ಹಾಗೂ ವಾಹನಗಳು ಸಂಚರಿಸದಂತೆ ಟ್ರಂಚ್ ತೆಗೆಸಲಾಗಿದೆ. ಎರಡೂ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ತಾಲ್ಲೂಕಿನಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 435 ಹೆಕ್ಟೇರ್ ಸಂರಕ್ಷಿತ ಅರಣ್ಯ ಪ್ರದೇಶವಿದೆ. ಮುದಗನೂರು ಕಾವಲ್‌ನಲ್ಲಿ 158 ಎಕರೆ ಸಂರಕ್ಷಿತ ಅರಣ್ಯವಿದ್ದು, ಇದರಲ್ಲಿ ರಂಗಸ್ವಾಮಿ ಎಂಬುವವರು 4 ಎಕರೆ, ಕೃಷ್ಣೇಗೌಡ 15 ಎಕರೆ ಹಾಗೂ ಶಿರೀನ್ 10 ಎಕರೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಎಂಟು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಅದೇ ರೀತಿ ಅರಸೀಕಟ್ಟೆ ಕಾವಲ್‌ನ ಸರ್ವೆ ನಂಬರ್‌ 116 ರಲ್ಲಿ ಸುರೇಶ್ ಎಂಬುವವರು 9 ಎಕರೆ ಮತ್ತು ಮಲ್ಲಮ್ಮ ಎಂಬುವವರು 5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಇದನ್ನೂ ಸಹ ಬಂದ್ ಮಾಡಿಸಲಾಗಿದೆ ಎಂದು ವಿವರಿಸಿದರು.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೂ ಈ ಕುರಿತು ಸೂಚನೆ ಹೋಗಿದೆ ಎಂದರು.

ಸದ್ಯ ಎರಡೂ ಕ್ರಷರ್‌ಗಳನ್ನು ಬಂದ್ ಮಾಡಿಸಿದ್ದು, ಯಾವುದೇ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಸನ ಅರಣ್ಯ ವಿಭಾಗದ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಈ ಕುರಿತು ಕ್ರಮ ಜರುಗಿಸಲಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ಇದ್ದರು.

ಜಿಲ್ಲಾಧಿಕಾರಿ, ಗಣಿ ಇಲಾಖೆ ಅನುಮತಿಯೊಂದಿಗೆ ನಡೆಯುತ್ತಿದ್ದ ಗಣಿಗಾರಿಕೆ ಸುಪ್ರೀಂ ಕೋರ್ಟ್ ಸೂಚನೆಯಂತ ಗಣಿಗಾರಿಕೆ ನಿಲ್ಲಿಸಲು ಕ್ರಮ
ಗಿಡಗಳ ವಿತರಣೆ
ಅರಣ್ಯ ಇಲಾಖೆ ಕೃಷಿ ಪ್ರೋತ್ಸಾಹ ಯೋಜನೆಯಡಿ ಜಿಲ್ಲೆಯಲ್ಲಿ 1.5 ಲಕ್ಷ ಗಿಡಗಳನ್ನು ಬೆಳೆಸಲು ರೈತರು ಮತ್ತು ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯ ಕೈಗೊಂಡಿದೆ. ಜಿಲ್ಲೆಯ ಎಲ್ಲ ಸಾಮಾಜಿಕ ಅರಣ್ಯ ವಿಭಾಗಗಳ ಮೂಲಕ ವಿವಿಧ ಅಳತೆಗಳ ಬ್ಯಾಗ್‌ಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದು ಇದಕ್ಕೆ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಇಲಾಖೆ ಮೂಲಕ ರೈತರ ಜಮೀನಿನಲ್ಲೇ ಗಿಡಗಳನ್ನು ನೆಡಲಾಗುವುದು. ಇದನ್ನು ಬೆಳೆಸಲು ಗಿಡವೊಂದಕ್ಕೆ ಮೊದಲ ವರ್ಷ ₹ 35 ಎರಡನೇ ವರ್ಷ ₹ 45 ಹಾಗೂ ಮೂರನೇ ವರ್ಷ ₹ 50 ರಂತೆ ಬದುಕುಳಿದಿರುವ ಗಿಡಗಳಿಗೆ ಒಟ್ಟು ₹ 125ಪ್ರೋತ್ಸಾಹಧನ ನೀಡಲಾಗುವುದು. ರೈತರಿಗೆ ಎಷ್ಟು ಸಾರ್ವಜನಿಕರಿಗೆ ಎಷ್ಟು ಗಿಡಗಳನ್ನು ವಿತರಿಸಬೇಕು ಎಂಬ ಕುರಿತು ನಿರ್ಧಾರ ಕೈಗೊಂಡು ವಿತರಣೆ ಮಾಡಲಾಗುವುದು ಎಂದರು. ಪಟ್ಟಣದ ಅರಣ್ಯ ಇಲಾಖೆ ಕಚೇರಿಯನ್ನು ಸದ್ಯದಲ್ಲೆ ಹೊಳೆನರಸೀಪುರ ರಸ್ತೆ ತಿಮ್ಮಕ್ಕ ಪಾರ್ಕ್ ಸಮೀಪ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT