ಹಾಸನ: ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಪೊಲೀಸ್ ಎಂದು ಹೇಳಿ ಮನೆಗೆ ಬಂದ ಅಪರಿಚಿತರು, ಚಿನ್ನಾಭರಣ, ನಗದು ಪಡೆದು ವಂಚನೆ ಮಾಡಿದ್ದಾರೆ.
ವಿಜಯನಗರ ಬಡಾವಣೆ 3ನೇ ಹಂತದ ನಿವಾಸಿ ಕವನಾ ಎಂಬುವವರು 4 ತಿಂಗಳ ಹಿಂದೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವವರೊಂದಿಗೆ ಮದುವೆಯಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಆಗದೇ ತವರು ಮನೆ ವಿಜಯನಗರ ಬಡಾವಣೆಗೆ ಬಂದು ವಾಸವಾಗಿದ್ದರು.
ಮಾ.13 ರಂದು ಸಂಜೆ 6 ಗಂಟೆಗೆ ಮಹಿಳೆಯೊಬ್ಬರು ಪೊಲೀಸ್ ಸಮವಸ್ತ್ರದಲ್ಲಿ ಕವನಾ ಅವರ ಮನೆಗೆ ಬಂದಿದ್ದು, ‘ನಾನು ಎಸ್ಪಿ ವಿಚಾರಣೆಗಾಗಿ ಬಂದಿದ್ದೇನೆ. ನಿನ್ನನ್ನು ಠಾಣೆಗೆ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿ ಕವನಾ ಅವರ ಮೊಬೈಲ್ ಕಿತ್ತುಕೊಂಡಿದ್ದಾಳೆ.
‘ನಾನು ಎಸ್ಪಿ. ನಿಮ್ಮ ಮಗಳಿಗೆ ಬುದ್ಧಿ ಹೇಳಿ. ನನಗೆ ಡಿವೋರ್ಸ್ ಕೊಡಿಸಿ ಎಂದು ಹೇಳಲು ನಿಮ್ಮ ಅಳಿಯ ನನ್ನನ್ನು ಕರೆದುಕೊಂಡು ಬಂದಿದ್ದಾರೆ’ ಎಂದು ಕವನಾ ಅವರ ತಂದೆಗೆ ಫೋನ್ ಸಹ ಮಾಡಿದ್ದಾಳೆ.
ಅದಾದ ಕೆಲವೇ ಹೊತ್ತಿನಲ್ಲಿ ಕವನಾ ತಂದೆ ಮನೆಗೆ ಬರುವಷ್ಟರಲ್ಲಿ ಖಾಲಿ ಹಾಳೆ ತರಿಸಿ, ‘ಸಹಿ ಮಾಡಿ ಕೊಡು, ಇಲ್ಲದಿದ್ದರೆ ನಿನ್ನನ್ನು ಹೊಡೆದು ಸಹಿ ಮಾಡಿಸಿಕೊಂಡು ಹೋಗುತ್ತೇನೆ’ ಎಂದು ಮಹಿಳೆ ಹೆದರಿಸಿದ್ದಾಳೆ.
‘ನೀನು ಮನೆ ಬಿಟ್ಟು ಬಂದಿರುವುದರಿಂದ ಗಂಡನ ಮನೆಯವರಿಗೆ 30 ಗ್ರಾಂ ಚಿನ್ನ ಮತ್ತು ₹ 10 ಲಕ್ಷ ನಷ್ಟವಾಗಿದೆ. ಆದ್ದರಿಂದ ನಿಮ್ಮ ಹತ್ತಿರ ಇರುವ ಚಿನ್ನ ಮತ್ತು ಮೊಬೈಲ್ ಕೊಡು’ ಎಂದು ಹೇಳಿ 20 ಗ್ರಾಂ ಚಿನ್ನದ ನೆಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, ₹2 ಸಾವಿರ ಸಾವಿರ ನಗದು ಪಡೆದುಕೊಂಡು ಹೋಗಿದ್ದಾಳೆ.
ಎಸ್ಪಿ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕವನಾ ಅವರು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ನೀಡಿದ್ದಾರೆ.