ರಟ್ಟೀಹಳ್ಳಿ: ಇನ್ನೇನು ಬೇಸಿಗೆ ರಜೆ ಕಳೆದು ಇನ್ನೊಂದು ವಾರದಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿವೆ. ಇದರ ಜೊತೆಗೆ ಮುಂಗಾರು ಮಳೆ ರಾಜ್ಯ ಪ್ರವೇಶಿಸುತ್ತಿದ್ದಂತೆ ಮಳೆ ಪ್ರಾರಂಭಗೊಳ್ಳಲಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ತೊಂದರೆಯಾಗದಂತೆ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ ಸನ್ನದ್ಧವಾಗಬೇಕಿದೆ.
ತಾಲ್ಲೂಕಿನ ಅನೇಕ ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿವೆ. ಅಲ್ಲಲ್ಲಿ ಶೌಚಾಲಯಗಳ ಕೊರತೆ, ಸಿಬ್ಬಂದಿ ಕೊರತೆ, ಕುಡಿಯುವ ನೀರು, ಅಕ್ಷರ ದಾಸೋಹ ಕೊಠಡಿ ದುಸ್ಥಿತಿ, ಕೊಠಡಿಗಳ ಕೊರತೆ ಹೀಗೆ ಹಲವಾರು ಮೂಲ ಸೌಕರ್ಯಗಳನ್ನು ಶಾಲೆ ಪ್ರಾರಂಭಕ್ಕೂ ಮುನ್ನಾ ಇಲಾಖೆ ಸರಿಪಡಿಸಬೇಕಿದೆ.
ತಾಲ್ಲೂಕಿನಲ್ಲಿ 46 ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳು, 65 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು, 9 ಸರ್ಕಾರಿ ಪ್ರೌಢಶಾಲೆಗಳು ಇದ್ದು, ಒಟ್ಟು 9,942 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲಾಖಾ ಮಾಹಿತಿಯಂತೆ ತಾಲ್ಲೂಕಿನಲ್ಲಿ 47 ಶಾಲೆಗಳ ಕಟ್ಟಡಗಳು ದುರಸ್ತಿ ಆಗಬೇಕಿದೆ. 22 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಪುನರ್ ನಿರ್ಮಾಣವಾಗಬೇಕಿದೆ. ಹಲವೆಡೆ ಶೌಚಾಲಯ ಇದ್ದರೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಲ್ಲ.
ತಾಲ್ಲೂಕಿನ ಕೆಲವು ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆಯಿಲ್ಲ. ಇದರಿಂದ ಗ್ರಾಮದ ಕಿಡಿಗೇಡಿಗಳು ಶಾಲಾ ಆವರಣವನ್ನು ಮಲೀನಗೊಳಿಸುತ್ತಾರೆ. ಶಾಲಾ ಮಕ್ಕಳಿಗೆ ಆಟವಾಡಲು ಕೆಲವೊಂದು ಶಾಲೆಗಳಿಗೆ ಆಟದ ಮೈದಾನವಿಲ್ಲ ಇವೆಲ್ಲ ಸೌಕರ್ಯಗಳನ್ನು ಶಿಕ್ಷಣ ಇಲಾಖೆ ಮಕ್ಕಳಿಗೆ ಒದಗಿಸಬೇಕಿದೆ.
ತಾಲ್ಲೂಕಿನ ಹಲವಾರು ಸರ್ಕಾರಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ಕೆಡವಿ ಹೊಸದಾಗಿ ಕೊಠಡಿಗಳನ್ನು ನಿರ್ಮಿಸಬೇಕು. ಕೇವಲ ಕಾಟಾಚಾರಕ್ಕೆ ಇಲಾಖೆಯವರು ತಗಡಿನ ಶೀಟ್ಗಳನ್ನು ಅಳವಡಿಸುವುದನ್ನು ಇಲಾಖೆ ಕೈಬಿಡಬೇಕು ಎನ್ನುತ್ತಾರೆ ಪೋಷಕರಾದ ಶಕುಂತಲಾ ಉಪ್ಪಾರ.
ತಾಲ್ಲೂಕಿನ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿಯಿಂದ ಮಾಹಿತಿ ಕೇಳಿದ್ದು ಪ್ರಸ್ತಾವನೆ ಸಿದ್ಧಪಡಿಸಿಕೊಳ್ಳಲಾಗಿದೆ. ಹೊಸ ಕಟ್ಟಡಗಳ ನಿರ್ಮಾಣದ ಬಗ್ಗೆ ಮಾಹಿತಿ ಕೇಳಿಲ್ಲಎನ್. ಶ್ರೀಧರ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.