ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರಿಗೆ 22 ಕ್ಯಾರೆಟ್‌ ಆಭರಣ ನೀಡಿ: ಗ್ರಾಹಕರ ನ್ಯಾಯಾಲಯ

Published 20 ಫೆಬ್ರುವರಿ 2024, 4:41 IST
Last Updated 20 ಫೆಬ್ರುವರಿ 2024, 4:41 IST
ಅಕ್ಷರ ಗಾತ್ರ

ಹಾವೇರಿ: ಗ್ರಾಹಕರಿಗೆ 1 ಫೆಬ್ರುವರಿ 2023ರ ಬೆಲೆಯಂತೆ ₹3.60 ಲಕ್ಷ ಮೊತ್ತಕ್ಕೆ ಜಿ.ಎಸ್‍.ಟಿ ಕಡಿತಗೊಳಿಸಿ 22 ಕ್ಯಾರೆಟ್ ಆಭರಣ ನೀಡಲು ಹಾವೇರಿ ನಗರದ ಕೆ.ಜಿ.ಪಿ ಜ್ಯುವೆಲರ್ಸ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಹಾವೇರಿಯ ವಿದ್ಯಾನಗರದ ನಿವಾಸಿ ಶಶಿಪ್ರಭಾ ಕೋಂ. ಸೂರ್ಯನಾರಾಯಣ ಹೆಗ್ಡೆ ಅವರು ಹಾವೇರಿ ನಗರದ ಕೆಜಿಪಿ ಜ್ಯುವೆಲರ್ಸ್‌ನಲ್ಲಿ ಮಾಸಿಕ ಕೆಜಿಪಿ ಬಂಗಾರ-ಬೆಳ್ಳಿ ಯೋಜನೆ ಸದಸ್ಯತ್ವ ಪಡೆದು ಪ್ರತಿ ತಿಂಗಳು ₹20 ಸಾವಿರದಂತೆ 25 2021ರ ಆಗಸ್ಟ್ 25ರಿಂದ 2023ರ ಜನವರಿ 17ರವರೆಗೆ ಒಟ್ಟು 18 ತಿಂಗಳಿಗೆ ₹3.60 ಲಕ್ಷ ಕೆಜಿಪಿ ಜ್ಯುವೆಲರ್ಸ್‌ಗೆ ಪಾವತಿಸಿದ್ದರು.

ಈ ಯೋಜನೆಯಡಿ ಸದಸ್ಯರಿಗೆ ಯಾವುದೇ ತರಹದ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಇರುವುದಿಲ್ಲ. ಅವರು ತುಂಬಿದ ಹಣಕ್ಕಿಂತ ಹೆಚ್ಚಿನ ಮೊತ್ತದ ಆಭರಣಕ್ಕೆ ಮಾತ್ರ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಭರಿಸಬೇಕಾಗಿತ್ತು. ಅವರು ಕೆಜಿಪಿ ಜ್ಯುವೆಲರ್ಸ್‌ಗೆ ತೆರಳಿ, ಬಳೆಗಳು ಹಾಗೂ ಪುರಾತನ ಆಹಾರ ಖರೀದಿಸಿದಾಗ ಬಳೆಗಳ ವೇಸ್ಟೇಜ್ ಶುಲ್ಕ 0.22 ಹಾಗೂ ಪುರಾತನ ಹಾರದ ವೇಸ್ಟೇಸ್ ಶುಲ್ಕ 0.25 ಸೇರಿ ₹3,88,38,834 ಹಾಗೂ ಜಿ.ಎಸ್.ಟಿ.ಸೇರಿ ₹3,91,800 ಮೊತ್ತದ ಬಿಲ್ ನೀಡಿ, ಮಾಸಿಕ ಯೋಜನೆ ಮೊತ್ತ ₹3.60 ಲಕ್ಷ ಕಡಿತಗೊಳಿಸಿ ಬಾಕಿ ಮೊತ್ತ ₹31,800 ನಗದು ಪಾವತಿಸುವಂತೆ ತಿಳಿಸಿದ್ದರು.

ಮಾಸಿಕ ಯೋಜನೆಯಡಿ ದಿನಾಂಕ 2023ರ ಜನವರಿ 31ರ ಅಂತರ್ಜಾಲದ ಆಭರಣದ ಮೇಲೆ ಪ್ರತಿ ಗ್ರಾಂಗೆ ₹5,235ರಂತೆ ನೀಡಬೇಕಾಗಿತ್ತು. ಆದರೆ 2023ರ ಏಪ್ರಿಲ್‌ 22ರ ಆಭರಣದ ಬೆಲೆ ಪ್ರತಿ ಗ್ರಾಂ.ಗೆ ₹5,605ರಂತೆ ಆಭರಣ ನೀಡಿದ್ದರಿಂದ ಸೇವಾ ನ್ಯೂನತೆ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಬಿ.ಎಸ್ ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ ಎಸ್.ಹಿರೇಮಠ ನೇತೃತ್ವದ ತಂಡ, ಗ್ರಾಹಕರಿಗೆ 1 ಫೆಬ್ರುವರಿ 2023ರ ಬೆಲೆಯಂತೆ (ನಿಶಾನೆ ಸಿ-03) ಪ್ರತಿ ಗ್ರಾಂಗೆ ₹5,235ರಂತೆ ₹3.60 ಲಕ್ಷಕ್ಕೆ ಜಿ.ಎಸ್.ಟಿ ಕಡಿತಗೊಳಿಸಿ ಆಭರಣ ನೀಡಲು ಆದೇಶಿಸಿದೆ.

ಗ್ರಾಹಕರು ಪಾವತಿಸಿದ ಹಣಕ್ಕಿಂತ ಹೆಚ್ಚಿನ ಆಭರಣ ಖರೀದಿಸಿದಲ್ಲಿ ಮಾತ್ರ ತಯಾರಿಕಾ ಶುಲ್ಕ, ವೇಸ್ಟೇಜ್ ಹಾಗೂ ಜಿಎಸ್‍ಟಿಯನ್ನು ಪಡೆಯಲು ಆದೇಶಿಸಲಾಗಿದೆ. ಸೇವಾ ನ್ಯೂನತೆಗೆ ₹10 ಸಾವಿರ, ಆರ್ಥಿಕ ಹಾಗೂ ಮಾಸಿಕ ತೊಂದರೆಗೆ ₹2 ಸಾವಿರ ಮತ್ತು ಪ್ರಕರಣದ ಖರ್ಚು₹2 ಸಾವಿರ ಮೊತ್ತವನ್ನು 30 ದಿನದೊಳಗಾಗಿ ಪಾವತಿಸಲು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

‘ಗ್ರಾಹಕರಿಗೆ ಚೀಟಿ ಮೊತ್ತ ಪಾವತಿಸಿ’

ಹಾವೇರಿ: ಗ್ರಾಹಕರಿಗೆ ಚೀಟಿ ಮುಕ್ತಾಯದ ಬಹುಮಾನ ಮೊತ್ತ ₹24 ಲಕ್ಷವನ್ನು ಶೇ 6ರ ಬಡ್ಡಿ ಸಮೇತ 30 ದಿನದೊಳಗಾಗಿ ಪಾವತಿಸಲು ರಾಣೆಬೆನ್ನೂರು ಖಾಸಗಿ ಚಿಟ್ಸ್‌ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ. ರಾಣೆಬೆನ್ನೂರು ನಗರದ ಶ್ರೀಕಾಂತ ಸೋಮನಾಥ ಹುಲ್ಮನಿ ಅವರು ಚಿಟ್ಸ್‌ನ ಸದಸ್ಯರಾಗಿದ್ದು ಪ್ರತಿ ತಿಂಗಳು ನಿಗದಿತ ಕಂತನ್ನು 19 ತಿಂಗಳವರೆಗೆ 21.25 ಲಕ್ಷ ಮತ್ತು ಚೀಟಿಯ ಕೊನೆಯ ಕಂತವನ್ನು 2022 ಅ.27ರಂದು ನೆಫ್ಟ್/ ಆರ್‌ಟಿಜಿಎಸ್‌ ಮೂಲಕ ಪಾವತಿ ಮಾಡಿದ್ದಾರೆ. ಚಿಟ್ಸ್‌ನವರು ಚೀಟಿಯ ಮುಕ್ತಾಯ ಮೊತ್ತ ₹25 ಲಕ್ಷ ನೀಡಲು ಒಪ್ಪಿಕೊಂಡಿದ್ದರು. ನಂತರ ₹7 ಲಕ್ಷ ರೂಪಾಯಿ ಎರಡು ಚೆಕ್ ಹಾಗೂ 7.25 ಲಕ್ಷದ ಮತ್ತೊಂದು ಚೆಕ್ ಸೇರಿ ₹21.25 ಲಕ್ಷ ಮೊತ್ತದ ಚೆಕ್ಕುಗಳನ್ನು ಶ್ರೀಕಾಂತ ಸೋಮನಾಥ ಹುಲ್ಮನಿ ಅವರಿಗೆ ನೀಡಿದ್ದರು. ಆದರೆ ಆ ಚೆಕ್‍ಗಳು ಅಮಾನ್ಯಗೊಂಡು ಖಾತೆಯಲ್ಲಿ ಸೂಕ್ತ ಮೊತ್ತ ಇಲ್ಲ ಎಂದು ತಿಳಿದ ಕಾರಣ ಪುನಃ ಚಿಟ್ಸ್ ಸಂಸ್ಥೆ ಸಂಪರ್ಕಿಸಿದಾಗ ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್ ಮೂಲಕ ಪಾವತಿಸಿದ್ದರು. ಬಾಕಿ ಚೀಟಿ ಹಣ ಪಾವತಿಸಿದ ಕಾರಣ ಚಿಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ನಿರ್ದೇಶಕರು ಹಾಗೂ ಸಹಕಾರ ಸಂಘದ ಉಪನಿಬಂಧಕರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್ ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ. ಎಸ್.ಹಿರೇಮಠ ನೇತೃತ್ವದ ತಂಡ ಚೀಟಿ ಮುಕ್ತಾಯದ ಬಹುಮಾನ ಮೊತ್ತ ₹24 ಲಕ್ಷಗಳನ್ನು ವಾರ್ಷಿಕ ಶೇ 6ರ ಬಡ್ಡಿಯೊಂದಿಗೆ ಪಾವತಿಸಲು ಆದೇಶಿಸಲಾಗಿದೆ. ಮಾನಸಿಕ ಹಾಗೂ ದೈಹಿಕ ವ್ಯಥೆಗಾಗಿ ಎರಡು ಸಾವಿರ ರೂಪಾಯಿ ಮತ್ತು ಪ್ರಕರಣದ ಖರ್ಚು ಎರಡು ಸಾವಿರ ಮೊತ್ತವನ್ನು 30 ದಿನದೊಳಗಾಗಿ ಪಾವತಿಸಲು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT