ಹಿರೇಕೆರೂರು: ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಏ.25ರಂದು ಪ್ರಚಾರ ಸಭೆ ಹಾಗೂ ಹಿರೇಕೆರೂರು ಪಟ್ಟಣದಲ್ಲಿ ಮಧ್ಯಾಹ್ನ 3.30ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡುವರು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 25ರಂದು ಬೆಳಿಗ್ಗೆ ರಟ್ಟೀಹಳ್ಳಿ ತಾಲ್ಲೂಕಿನ ಮಕರಿ ಗ್ರಾಮ ಹಾಗೂ ನಾಗವಂದ ಗ್ರಾಮದಲ್ಲಿ ಮತ್ತು ಮಧ್ಯಾಹ್ನ ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುವರು ಎಂದು ಹೇಳಿದರು.
ಮಧ್ಯಾಹ್ನ ಹಿರೇಕೆರೂರು ಪಟ್ಟಣದ ವಕೀಲರ ಭವನದಲ್ಲಿ ನ್ಯಾಯವಾದಿ ಸಂಘದದೊಂದಿಗೆ ಸಭೆ, ಮಹಿಳಾ ಮುಖಂಡರ ಸಭೆ ಹಾಗೂ ತಾಲ್ಲೂಕಿನ ಎಲ್ಲ ಸಮಾಜದ ಪ್ರಮುಖರ ಸಭೆ ನಡೆಸುವರು. ನಂತರ ತಾಲ್ಲೂಕಿನ ಎಲ್ಲ ಗ್ರಾಮಗಳ ಬಿಜೆಪಿ ಕಾರ್ಯಕರ್ತರೊಂದಿಗೆ ರೋಡ್ ಶೋ ಮೂಲಕ ಮತಯಾಚನೆ ಮಾಡುವರು ಎಂದರು.
ರೋಡ್ ಶೋ ನಮ್ಮ ನಿವಾಸದಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಜಿ.ಬಿ.ಶಂಕರರಾವ್ ವೃತ್ತದ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶಟ್ಟಿ, ಕೆ.ಜೆ.ಪ್ರತಾಪ್, ಹೊನ್ನಪ್ಪ ಸಾಲಿ ಇದ್ದರು.