ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಶೈಕ್ಷಣಿಕ ಸಾಲ; ‘ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ’

ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು
Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ‘ನಮಗೆಲ್ಲ ವಿವಿಧ ಬ್ಯಾಂಕುಗಳಿಂದ ‘ಶೈಕ್ಷಣಿಕ ಸಾಲ’ ಜನವರಿಯಲ್ಲೇ ಮಂಜೂರಾಗಿ ಕಾಲೇಜು ಅಕೌಂಟಿಗೆ ಹಣ ಬಂದಿದೆ. ಆದರೆ, 5 ತಿಂಗಳು ಕಳೆದರೂ ಕಾಲೇಜಿನವರು ನಮಗೆ ಹಣ ಕೊಟ್ಟಿಲ್ಲ. ‘ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ’ ಎಂಬಂತಾಗಿದೆ ನಮ್ಮ ಪರಿಸ್ಥಿತಿ’ ಎಂದು ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಕಣ್ಣೀರಿಟ್ಟರು.

ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಕಾಲೇಜಿನ ಹಲವಾರು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವಿವಿಧ ಬ್ಯಾಂಕುಗಳಿಗೆ ‘ಶೈಕ್ಷಣಿಕ ಸಾಲ’ಕ್ಕೆ ಅರ್ಜಿ ಹಾಕಿದ್ದರು. ನಂತರ ಬ್ಯಾಂಕ್‌ಗಳು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಸಾಲವನ್ನು 2022ರ ಜನವರಿಯಲ್ಲೇ ಮಂಜೂರು ಮಾಡಿದ್ದವು. ಮಂಜೂರಾದ ಸಾಲದ ಮೊತ್ತ ಕಾಲೇಜಿನ ಅಕೌಂಟಿಗೆ ವರ್ಗಾವಣೆಯಾಗಿತ್ತು.

ಮಂಜೂರಾದ ಸಾಲದ ಮೊತ್ತವನ್ನು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಿಬ್ಬಂದಿ ಕೊಡಬೇಕಿತ್ತು. ಆದರೆ, ‘ಇನ್ನೂ ಅಕೌಂಟಿಗೆ ಹಣ ಬಂದಿಲ್ಲ’ ಎಂದು ಕಾಲೇಜು ಸಿಬ್ಬಂದಿ ಸಬೂಬು ಹೇಳುತ್ತಾ ದಿನದೂಡಿದ್ದಾರೆ. ನಂತರ ವಿದ್ಯಾರ್ಥಿಗಳು ಸಂಬಂಧಿಸಿದ ಬ್ಯಾಂಕ್‌ ಶಾಖೆಗಳಿಗೆ ಹೋಗಿ ವಿಚಾರಿಸಿದಾಗ ಕೆಲವರಿಗೆ ಡಿಸೆಂಬರ್‌ ಮತ್ತೆ ಕೆಲವರಿಗೆ ಜನವರಿಯಲ್ಲೇ ‘ಶೈಕ್ಷಣಿಕ ಸಾಲ’ ಮಂಜೂರಾಗಿರುವುದು ಗೊತ್ತಾಗಿದೆ.

₹6 ಲಕ್ಷ ವಂಚನೆ:ಕಾಲೇಜಿನಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಹಾಗೂ ಕಂಪ್ಯೂಟರ್‌ ಸೈನ್ಸ್‌ ಈ ನಾಲ್ಕು ವಿಭಾಗಗಳ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಶೈಕ್ಷಣಿಕ ಸಾಲ’ ಇದುವರೆಗೂ ಸಿಕ್ಕಿಲ್ಲ. ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹90 ಸಾವಿರದವರೆಗೆ ಸಾಲ ಮಂಜೂರಾಗಿತ್ತು. ಕಾಲೇಜು ಅಕೌಂಟಿಗೆ ಬಂದಿದ್ದ ಅಂದಾಜು ₹6 ಲಕ್ಷ ಎಲ್ಲಿ ಹೋಯಿತು? ಎಂಬುದು ಯಕ್ಷ ಪ್ರಶ್ನೆಯಾಗಿದೆ. ‘ಕಚೇರಿ ಸಿಬ್ಬಂದಿಯೇ ತಿಂದು ನಮಗೆ ಮೋಸ ಮಾಡಿದ್ದಾರೆ’ ಎಂಬುದು ವಿದ್ಯಾರ್ಥಿಗಳ ಗಂಭೀರ ಆರೋಪ.

ಸಾಲ ಮಾಡಿ ಶುಲ್ಕ ಕಟ್ಟಿದ್ದೆವು:‘ಕೈಸಾಲ ಮಾಡಿ ಕಾಲೇಜು ಶುಲ್ಕ ಕಟ್ಟಿದ್ದೆವು. ‘ಸ್ಟಡಿ ಲೋನ್’ ಬಂದ ತಕ್ಷಣ ಸಾಲವನ್ನು ತೀರಿಸುವ ಉದ್ದೇಶವಿತ್ತು. ಆದರೆ ಐದು ತಿಂಗಳಿಂದ ನಮ್ಮ ಹಣ ನಮಗೆ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕಾಲೇಜಿನವರು ಕೊಡುತ್ತಿಲ್ಲ.ಸಾಲ ಕೊಟ್ಟವರು ಹಣ ವಾಪಸ್‌ ಕೇಳುತ್ತಿದ್ದಾರೆ. ಎಲ್ಲಿಂದ ಕೊಡೋಣ?’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

ಲೋನ್‌ ಕೈ ಸೇರುವುದು ಯಾವಾಗ?
‘ಪ್ರಾಂಶುಪಾಲರನ್ನು ಕೇಳಿದರೆ, ‘ಕೆಲವು ಕಚೇರಿ ಸಿಬ್ಬಂದಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ನಡೆಯುತ್ತಿರುವ ತನಿಖೆ ಮುಕ್ತಾಯವಾದರೆ ಯಾರು ಹಣ ದೋಚಿದ್ದಾರೆ ಎಂಬುದು ತಿಳಿಯುತ್ತದೆ’ ಎಂದು ಹೇಳುತ್ತಿದ್ದಾರೆ. ತನಿಖೆ ಮುಗಿಯುವುದು ಯಾವಾಗ? ಹಣ ದೋಚಿದವರಿಂದ ವಸೂಲಿ ಮಾಡುವುದು ಯಾವಾಗ? ನಮ್ಮ ಲೋನ್‌ ನಮ್ಮ ಕೈ ಸೇರುವುದು ಯಾವಾಗ?’ ಎಂದು ಸಾಲು ಸಾಲು ಪ್ರಶ್ನೆಗಳನ್ನು ಹಾಕುತ್ತಿದ್ದಾರೆ ವಿದ್ಯಾರ್ಥಿಗಳು.

‘ಆಸ್ತಿ ಪತ್ರ ಅಡ ಇಟ್ಟಿದ್ದೇವೆ’
‘ನಾವೆಲ್ಲರೂ ಸ್ಟಡಿ ಲೋನ್‌ ಮೇಲೆ ಅವಲಂಬಿತರಾಗಿದ್ದೆವು. ಲೋನ್‌ ಅಮೌಂಟ್‌ನಲ್ಲಿ ಕಾಲೇಜು ಶುಲ್ಕ, ಪ್ರಾಜೆಕ್ಟ್ ವರ್ಕ್‌ ಮುಂತಾದ ಖರ್ಚುಗಳನ್ನು ಭರಿಸೋಣ ಅಂದುಕೊಂಡಿದ್ದೆವು. ಕೆಲವರು ಆಸ್ತಿ ಪತ್ರ ಅಡ ಇಟ್ಟು ಸಾಲ ತಂದಿದ್ದಾರೆ. ಕೆಲವರು ಸಂಬಂಧಿಕರಲ್ಲಿ ಸಾಲ ಪಡೆದಿದ್ದಾರೆ. ಸಾಲ ಕೊಟ್ಟವರಿಗೆ ಹೇಗೆ ಮುಖ ತೋರಿಸೋಣ. ಸಂಕಷ್ಟದಲ್ಲಿರುವ ನಮಗೆ ವಿದ್ಯಾಭ್ಯಾಸ ಮುಂದುವರಿಸುವುದೇ ಕಷ್ಟವಾಗಿದೆ’ ಎಂದು ಹಾವೇರಿ ಎಂಜಿನಿಯರಿಂಗ್‌ ಕಾಲೇಜಿನ ಬಡ ವಿದ್ಯಾರ್ಥಿಗಳು ದುಃಖ ತೋಡಿಕೊಂಡರು.

‘ಅರಿವು ಸಾಲ’ದಲ್ಲೂ ವಂಚನೆ!
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ‘ಅರಿವು ಸಾಲ ಯೋಜನೆ’ಯಡಿ ಕಾಲೇಜಿನ ಕೆಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ಜನವರಿ ತಿಂಗಳಲ್ಲೇ ಮಂಜೂರಾಗಿದೆ. ಕಾಲೇಜಿನ ಬ್ಯಾಂಕ್‌ ಖಾತೆಗೆ ಜಮೆಯಾಗಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪತ್ರ ಬರೆದು ತಿಳಿಸಿದ್ದಾರೆ. ಆದರೆ, ಇದುವರೆಗೂ ವಿದ್ಯಾರ್ಥಿಗಳಿಗೆ ಹಣ ಸಿಕ್ಕಿಲ್ಲ ಎಂಬ ಬಗ್ಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ದೂರುಗಳು ಕೇಳಿಬಂದಿವೆ.

**

‘ಶೈಕ್ಷಣಿಕ ಸಾಲ’ ಸಿಗದ ಬಗ್ಗೆ ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ. ತನಿಖೆಯ ನಂತರ ‘ಲೋನ್‌ ಅಮೌಂಟ್‌’ ಏನಾಗಿದೆ ಎಂಬುದು ಗೊತ್ತಾಗುತ್ತದೆ.
– ಡಾ.ಜಗದೀಶ ಕೋರಿ, ಪ್ರಾಂಶುಪಾಲ, ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT