‘ನನ್ನ ಮಗ ಸಣ್ಣಾಂವ್ ಅದಾನ್ರಿ ಹೇಗಾದ್ರೂ ಮಾಡಿ ನನ್ನ ಮಗನನ್ನು ಹುಡುಕಿಕೊಡ್ರಿ ಸರ್...’ ಎಂದು ರಾಹುಲ್ ಅವರ ತಾಯಿ ಸುನಿತಾ ಎಳ್ಳಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗ ಕಮಲಾವತಿ ನದಿಯಲ್ಲಿ ಮುಳುಗಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಳುತ್ತಲೇ ನದಿಯತ್ತ ದೌಡಾಯಿಸಿದರು. ತಂದೆ ನಾಗಪ್ಪ ಅವರು ‘ನನ್ನ ಮಗನೊಂದಿಗೆ ನಾನು ಹೋಗ್ತಿನ್ರಿ’ ಎಂದು ದುಃಖಿಸುತ್ತಲೇ ನದಿಗೆ ಹಾರಲು ಯತ್ನಿಸಿದರು. ಪೊಲೀಸರು ಅವರನ್ನು ಎರಡ್ಮೂರು ಬಾರಿ ತಡೆದರು. ಈಚೆಗೆ ತಾಲ್ಲೂಕಿನ ಸಂಗಾವಿ (ಟಿ) ಬಳಿ ಕಾಗಿಣಾ ನದಿಯಲ್ಲಿ ರಾಜು ಕೊಚ್ಚಿಕೊಂಡು ಹೋಗಿದ್ದ. 3–4 ದಿನ ಕಾರ್ಯಾಚರಣೆ ನಡೆದಿತ್ತು. ಆದರೆ ಸಿಕ್ಕಿರಲಿಲ್ಲ. ಈ ಘಟನೆ ಮಾಸುವ ಮುನ್ನವೇ ಮತ್ತೆ ಕಮಲಾವತಿ ನದಿಯಲ್ಲಿ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ.
ನದಿಯತ್ತ ತೆರಳದಿರಲು ಮನವಿ
ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಕಾಗಿಣಾ ಮತ್ತು ಕಮಲಾವತಿ ನದಿಗಳಲ್ಲಿ ನೀರಿನ ಪ್ರವಾಹ ಹೆಚ್ಚುತ್ತಿದೆ. ಈಗಾಗಲೇ ಮೂರ್ನಾಲ್ಕು ಬಾರಿ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರಿ ಮನವಿ ಮಾಡಲಾಗಿದೆ. ಅಲ್ಲದೆ ಪ್ರಕಟಣೆ ನೀಡಿ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ವಹಿಸಿ ನದಿಯತ್ತ ತೆರಳುತ್ತಿರುವುದು ಸರಿಯಲ್ಲ. ಈಗಾಗಲೇ ನದಿಯಲ್ಲಿ ಪ್ರವಾಹಕ್ಕೆ ಇಬ್ಬರು ಕೊಚ್ಚಿಕೊಂಡು ಹೋದ ಘಟನೆ ಜರುಗಿರುವುದು ಅತ್ಯಂತ ದುಃಖದ ಸಂಗತಿ. ಮತ್ತೊಮ್ಮೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದ್ದು ನಾಲಾ ಹಳ್ಳ ನದಿಯತ್ತ ತೆರಳಬಾರದು’ ಎಂದು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ತಿಳಿಸಿದ್ದಾರೆ.