ಕಲಬುರ್ಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ ಚವ್ಹಾಣ ಎಂಬಾತ ಕುರಿ ಶೆಡ್ನ ಆಳದಲ್ಲಿ 1352 ಕೆ.ಜಿ. ಗಾಂಜಾ ದಾಸ್ತಾನು ಮಾಡಿದ್ದನ್ನು ಪತ್ತೆ ಹಚ್ಚಲು ವಿಫಲರಾಗಿ ಕರ್ತವ್ಯ ಲೋಪ ಎಸಗಿದ ಪ್ರಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ಅವರು ಕಾಳಗಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಭೋಜರಾಜ ರಾಠೋಡ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.
ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ, ಬೀಟ್ ಪೊಲೀಸ್ ಶರಣಪ್ಪ, ಕಾನ್ ಸ್ಟೆಬಲ್ ಅನಿಲ್ ಭಂಡಾರಿ ಅವರನ್ನೂ ಅಮಾನತು ಮಾಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಆಟೊ ಚಾಲಕ ನೀಡಿದ ಸುಳಿವಿನ ಮೇರೆಗೆ ಕಾಳಗಿಯ ಚಂದ್ರಕಾಂತ ಚವ್ಹಾಣ, ಬೀದರ್ ಜಿಲ್ಲೆ ಔರಾದನ ನಾಗನಾಥ, ವಿಜಯಪುರ ಜಿಲ್ಲೆ ಆಲಮೇಲದ ಸಿದ್ದನಾಥ ಲಾವಟೆಯನ್ನು ಬಂಧಿಸಿದ್ದರು.
ಪೊಲೀಸ್ ಠಾಣೆಯ ಸಮೀಪದಲ್ಲಿಯೇ ಚಂದ್ರಕಾಂತನ ಶೆಡ್ ಇದ್ದರೂ ಮಾಹಿತಿ ದೊರೆಯದಿರುವುದು ಕಲಬುರ್ಗಿ ಜಿಲ್ಲಾ ಪೊಲೀಸರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿತ್ತು.