ಮನೆ, ಗ್ರಾಮ, ಜಮೀನುಗಳಿಗೆ ನುಗ್ಗಿದ ನದಿನೀರು ಎಲ್ಲೆಂದರಲ್ಲಿ ತನ್ನ ಕರಾಳತೆ ಬಿಟ್ಟು ಹೋಗಿದೆ. ಸತತ ಮಳೆಯಿಂದ ಸಂಕಷ್ಟದ ಬದುಕಿಗೆ ತಳ್ಳಲ್ಪಟ್ಟಿದ್ದ ರೈತರಿಗೆ, ಪ್ರವಾಹವು ಗಾಯದ ಮೇಲೆ ಬರೆ ಎಳೆದಿದೆ. ಕಡಬೂರು, ಇಂಗಳಗಿ, ಚಾಮನೂರು, ಕುಲ್ಕುಂದಿ, ಕೊಲ್ಲೂರು, ಸನ್ನತಿ ಸೇರಿದಂತೆ ನದಿ ಪಾತ್ರದ ಸಾವಿರಾರು ಎಕರೆ ಪ್ರದೇಶದ ಭೂಮಿಯಲ್ಲಿ ಬೆಳೆಗಳು ನಾಶವಾಗಿವೆ. ಮುಂಗಾರು ಬೆಳೆ ಕಿತ್ತುಕೊಂಡ ಪ್ರವಾಹ ಹಿಂಗಾರು ಬಿತ್ತನೆಗೂ ಸಂಕಷ್ಟ ತಂದಿದೆ. ಈಗ ಪ್ರವಾಹ ಹೊತ್ತು ತಂದ ಕಸಕಡ್ಡಿ ಹಾಗೂ ಹೂಳಿನಿಂದ ಜಮೀನುಗಳು ತುಂಬಿ ಹೋಗಿದ್ದು, ಸ್ವಚ್ಛಗೊಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.