ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದಿಗಂತದಲ್ಲಿ ಚಂದ್ರ ಗ್ರಹಣ ವಿಸ್ಮಯ

Last Updated 9 ನವೆಂಬರ್ 2022, 9:02 IST
ಅಕ್ಷರ ಗಾತ್ರ

ಕಲಬುರಗಿ: ಬಾನಂಗಳದಲ್ಲಿ 15 ದಿನಗಳ ಹಿಂದೆ ಸಂಭವಿಸಿದ್ದ ಪಾರ್ಶ್ವ ಸೂರ್ಯ ಗ್ರಹಣದ ಬೆನ್ನಲ್ಲೇ ಮಂಗಳವಾರ ಭಾಗಶಃ ಚಂದ್ರ ಗ್ರಹಣದ ಮತ್ತೊಂದು ಖಗೋಳ ಕೌತುಕವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.

ಪಶ್ಚಿಮದಲ್ಲಿ ಸೂರ್ಯ ಬರುತ್ತಿದ್ದಂತೆ ಪೂರ್ವದಲ್ಲಿ ಭೂಮಿಯ ನೆರಳಿನ ಒಂದು ಭಾಗದೊಂದಿಗೆ ಪೂರ್ಣ ಚಂದ್ರ ಬಾನಂಗಳದಲ್ಲಿ ಸಂಜೆ 5.46ರ ಸುಮಾರಿಗೆ ಕೆಂಪಗೆ ಕಾಣಿಸಿಕೊಂಡ.

ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರವು ಸಂಜೆ ಆಗಸದಲ್ಲಿ ಖಗೋಳ ವಿದ್ಯಮಾನ ವೀಕ್ಷಿಸಲು ಎರಡು ದೂರದರ್ಶಕಗಳ ವ್ಯವಸ್ಥೆ ಮಾಡಿತ್ತು. ಟೆಲಿಸ್ಕೋಪ್‌ಗಳಲ್ಲಿ ನೂರಾರು ಸಾರ್ವಜನಿಕರು ಗ್ರಹಣದ ಸುಂದರ ದೃಶ್ಯಗಳನ್ನು ವೀಕ್ಷಿಸಿದರು.

ಬೆಂಗಳೂರಿನ ಜವಾಹರ್‌ಲಾಲ್‌ ನೆಹರೂ ತಾರಾಲಯದಲ್ಲಿ ಒಂದು ಟೆಲಿಸ್ಕೋಪ್ ಮೂಲಕ ಯೂಟ್ಯೂಬ್‌ ನೇರ ಪ್ರಸಾರ ಮಾಡಲಾಯಿತು. ಇದನ್ನು ಲ್ಯಾಪ್‌ಟಾಪ್‌ನ ಎಚ್‌ಡಿಎಂಐ ಕೆಬಲ್ ಪ್ರೊಜೆಕ್ಟರ್‌ ಮುಖಾಂತರ ದೊಡ್ಡ ಪರದೆ ಮೇಲೆ ಪ್ರಸಾರ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಯಿತು.

ಖಗೋಳ ವಿದ್ಯಮಾನ ವೀಕ್ಷಿಸಿದ ಶಾಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಹರ್ಷ ವ್ಯಕ್ತಪಡಿಸಿದರು.

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಒಂದೇ ಸರಳರೇಖೆಯಲ್ಲಿ ಬರುವ ಈ ದಿನದಲ್ಲಿ ಭೂಮಿಯ ಛಾಯೆ ಚಂದ್ರನ ಮೇಲೆ ಬೀಳುವ ಮೂಲಕ ಭಾಗಶಃ ಚಂದ್ರ ಗ್ರಹಣ ಗೋಚರವಾಯಿತು.

‘ಕಡಿಮೆ ಅವಧಿಯಲ್ಲೇ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಮಾತ್ರವೇ ಸಂಭವಿಸುತ್ತಿದೆ. ಕಳೆದ 15 ದಿನಗಳಲ್ಲಿ ಸಂಭವಿಸಿದ್ದ ಎರಡೂ ಗ್ರಹಣಗಳು ಜಿಲ್ಲೆಯಲ್ಲಿ ಗೋಚರಿಸಿವೆ’ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಭರದನ್ ರಾಮಯ್ಯ ತಿಳಿಸಿದರು.

‘ಚಂದ್ರ ಗ್ರಹಣ ವೀಕ್ಷಣೆಗೆ ವಿಜ್ಞಾನ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡೆವು.ಗ್ರಹಣದ ಸಮಯ ಮತ್ತು ಬಾನಲ್ಲಿ ಚಂದ್ರನ ಸಾಮೀಪ್ಯವೂ ತೀರ ಕಡಿಮೆ ಇರುವ ಕಾರಣ ಪೂರ್ವದ ಆಗಸದಲ್ಲಿ ತಕ್ಷಣವೇ ಕಾಣಿಸಲಿಲ್ಲ. ಆರಂಭದಲ್ಲಿ ಗಿಡ–ಮರಗಳು ಅಡ್ಡಿಯಾದವು. ಟೆಲಿಸ್ಕೋಪ್‌ ಅನ್ನು ಎತ್ತರದ ಜಾಗಕ್ಕೆ ಬದಲಾಯಿಸಿದಾಗ ಗ್ರಹಣದ ಪ್ರಖರತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು’ ಎಂದು ವಿವರಿಸಿದರು.

ವಿಜ್ಞಾನ ತಜ್ಞ ಲಕ್ಷ್ಮಿನಾರಾಯಣ, ವಿಜ್ಞಾನ ಕೇಂದ್ರದ ಸಿಬ್ಬಂದಿ ರಮೇಶ, ಮಲ್ಲಿಕಾರ್ಜುನ, ಅಶೋಕ, ರಾಘವೇಂದ್ರ, ವೈಷ್ಣವಿ ಇದ್ದರು. ನೂತನ ವಿದ್ಯಾಲಯದ ಭೌತವಿಜ್ಞಾನ ಪದವಿ ವಿಭಾಗದ ಉಪನ್ಯಾಸಕರಾದ ಶ್ರೀಕಾಂತ ಎಕ್ಕೇಳಿಕರ್, ರಾಧಾ ಖಜೂರಿ, ಶ್ರೀಪಾದ ಜೋಶಿ ಅವರು ವಿದ್ಯಾರ್ಥಿನಿಯರನ್ನು ಕರೆತಂದು ಗ್ರಹಣ ಬಗ್ಗೆ ಮಾಹಿತಿ ನೀಡಿದರು.

1 ಗಂಟೆ 36 ನಿಮಿಷ ಗ್ರಹಣ ಗೋಚರ

ಜಿಲ್ಲೆಯಲ್ಲಿಭಾಗಶಃ ಚಂದ್ರ ಗ್ರಹಣವು 1 ಗಂಟೆ 39 ನಿಮಿಷದವರೆಗೆ ಕಾಣಿಸಿತು. ಸಂಜೆ 5.46ಕ್ಕೆ ಶೇ 33.8ರಷ್ಟು ಗಾತ್ರದೊಂದಿಗೆಪಾರ್ಶ್ವ ಚಂದ್ರ ಗ್ರಹಣ ಆರಂಭವಾಯಿತು.

ಆದರೆ, ಕಲಬುರಗಿ ಜಿಲ್ಲೆಯಲ್ಲಿ ಸಂಜೆ 6.15ಕ್ಕೆ ಶೇ 10ರಷ್ಟು ಗ್ರಹಣ ಗೋಚರವಾಯಿತು. ಮಧ್ಯಮ ಅವಧಿಯಲ್ಲಿ ಗರಿಷ್ಠ ಶೇ 23ರಷ್ಟು ಗೋಚರವಾಗಿ, ಸಂಜೆ 7.26ಕ್ಕೆ ಗ್ರಹಣವು ಕೊನೆಯಾಯಿತು.

ದೇವರ ದರ್ಶನ ಬಂದ್

ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಮಧ್ಯಾಹ್ನದಿಂದಲೇ ಬಾಗಿಲು ಹಾಕಿ, ಭಕ್ತರಿಗೆ ಮೂರ್ತಿಗಳ ದರ್ಶನ ಬಂದ್‌ ಮಾಡಲಾಯಿತು.

ನಗರದ ಶರಣಬಸವೇಶ್ವರ ದೇವಸ್ಥಾನ, ಯಲ್ಲಮ್ಮ ದೇಗುಲ, ರಾಮಮಂದಿರ, ಸಾಯಿ ಮಂದಿರ, ಕೊರಂಟಿ ಹನುಮಾನ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ಇರಲಿಲ್ಲ. ಗ್ರಹಣ ಮುಗಿದ ಬಳಿಕ ದೇವಾಲಯಗಳಲ್ಲಿ ಶುದ್ಧೀಕರಣ ನಡೆಸಿ ದೇವರಿಗೆ ಪೂಜೆ, ಆರತಿ ನಡೆಸಲಾಯಿತು.

ಸೂರ್ಯ ಗ್ರಹಣದ ವೇಳೆ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಚಂದ್ರ ಗ್ರಹಣದ ವೇಳೆ ಜನ ಜೀವನ ಸಹಜವಾಗಿತ್ತು.

ಗ್ರಹಣದ ವೇಳೆ ಬಾಳೆಹಣ್ಣು ಸೇವನೆ

ನಗರದ ಜಗತ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಬಿಜಿವಿಎಸ್ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆ ಮುಖಂಡರು ಗ್ರಹಣ ವೀಕ್ಷಿಸಿ, ಅದೇ ವೇಳೆ ಬಾಳೆಹಣ್ಣು ತಿಂದರು. ಗ್ರಹಣವೊಂದು ಪ್ರಕೃತಿಯ ಸಹಜ ವಿದ್ಯಮಾನ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅರಿವು ಮೂಡಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ್ ಗೂಳಿ ಮಾತನಾಡಿ, ‘ಚಂದ್ರ ಗ್ರಹಣ ಬಾಹ್ಯಾಕಾಶ ಖಗೋಳ ವಿದ್ಯಮಾನ ಆಗಿದೆ. ಯಾವುದೇ ಜೀವಿಗೆ ಹಾನಿ ಮಾಡುವುದಿಲ್ಲ. ಗ್ರಹಣದ ಅವಧಿಯಲ್ಲಿ ಊಟ ಮಾಡ ಬಾರದು ಎಂಬುದು ತಪ್ಪು ಕಲ್ಪನೆ. ಆಗಾಗ ಸಂಭವಿಸುವ ನೆರಳು– ಬೆಳಕಿನ ಆಟ. ಜನರು ವೌಢ್ಯದಿಂದ ಹೊರ ಬರಬೇಕು’ ಎಂದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ, ರವೀಂದ್ರ ಶಾಬಾದಿ, ಪ್ರಭು ಖಾನಾಪುರೆ, ಪ್ರೇಮಾನಂದ, ಜಗಮೋಹನ, ಸತೀಶ ಸಜ್ಜನ, ಸಿದ್ದರಾಮ ಯಳವಂತಗಿ, ಮಹಾಂತೇಶ ಕಲಬುರಗಿ, ಶಿವಶರಣಪ್ಪ, ರೇವಣಸಿದ್ದ ಕಲಬುರಗಿ ಇದ್ದರು.

*ಸೂರ್ಯ ಗ್ರಹಣ ಬೆನ್ನಲ್ಲೇ ಚಂದ್ರ ಗ್ರಹಣವು ಮೂರು ವರ್ಷಗಳಲ್ಲಿ ಒಮ್ಮೆ ಮಾತ್ರವೇ ಸಂಭವಿಸುತ್ತದೆ. ಖಗೋಳದ ವಿಸ್ಮಯನ್ನು ನೂರಾರು ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು ದೂರದರ್ಶಕದ ಮೂಲಕ ವೀಕ್ಷಿಸಿದರು.


-ಭರದನ್ ರಾಮಯ್ಯ, ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ

*ಪಠ್ಯಪುಸ್ತಕದಲ್ಲಿ ಗ್ರಹಣ ಸಂಭವಿಸುವ ವಿಧಾನವನ್ನು ಚಿತ್ರ, ಬರಹದಲ್ಲಿ ನೋಡಿದ್ದೆವು. ದೂರದರ್ಶಕದ ಮೂಲಕ ನೇರವಾಗಿ ವೀಕ್ಷಿಸಿ ವಿಜ್ಞಾನ ಎಷ್ಟೊಂದು ವಿಸ್ಮಯ ಎಂಬುದು ಮನವರಿಕೆಯಾಯಿತು.


-ಕೀರ್ತಿ, ಎನ್‌ವಿ ವಿಜ್ಞಾನ ಪದವಿ ಕಾಲೇಜಿನ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT