ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯದಲ್ಲಿ ಸಿಲುಕಿದ್ದ ಇಬ್ಬರನ್ನು ಗ್ರಾಮಸ್ಥರು ಪ್ರವಾಹದಿಂದ ಗುರುವಾರ ರಕ್ಷಿಸಲಾಗಿದೆ.
ಹತ್ತಿರದ ನಾಗರಾಳ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಟ್ಟಿದ್ದರಿಂದ ತಾಜಲಾಪುರದ ಮಾರುತಿ ಹಡಪದ ಹಾಗೂ ಚಿಮ್ಮನಚೋಡದ ಚಂದ್ರಪ್ಪ ಭಕ್ತಂಪಳ್ಳಿ ದೇವಾಲಯದಲ್ಲಿ ಸಿಲುಕಿದ್ದರು.
ದೇವಾಲಯದಲ್ಲಿ ಮಲಗಿದ್ದ ಅವರು ಪ್ರವಾಹ ನೀರಿನ ಮಟ್ಟ ಹೆಚ್ಚಾದಂತೆ ದೇವಾಲಯಕ್ಕೆ ನುಗ್ಗಿದೆ. ಇದರಿಂದ ಅವರು ದೇವಾಲಯದ ಹಿಂದಿನ ಸಮುದಾಯ ಭವನಕ್ಕೆ ತೆರಳಿದ್ದಾರೆ. ಅಲ್ಲಿಗೂ ನೀರು ಹಬ್ಬಿದಾಗ ಇಡಿ ರಾತ್ರಿ ನೀರಿನಲ್ಲಿಯೇ ನಿಂತು ಜಾಗರಣೆ ಮಾಡಿದ್ದಾರೆ. ಬೆಳಿಗ್ಗೆ ಸುದ್ದಿ ತಿಳಿದು ಗ್ರಾಮಸ್ಥರು ಜಲಾಶಯಕ್ಕೆ ತೆರಳಿ ವಿಷಯ ತಿಳಿಸಿ ನೀರು ಬಿಡುವುದು ಬಂದ್ ಮಾಡಿಸಿದ್ದಾರೆ.
ಆಗ ನದಿಯಲ್ಲಿ ಪ್ರವಾಹದ ನೀರಿನ ಮಟ್ಟ ಕ್ಷೀಣಿಸಿದ ಮೇಲೆ ಹಗ್ಗ ಕಟ್ಟಿ ದೇವಾಲಯದಲ್ಲಿ ಸಿಲುಕಿದವರನ್ನು ರಕ್ಷಿಸಲಾಯಿತು ಎಂದು ನಿವೃತ್ತ ಪಿಡಿಒ ಸಂಗಾರೆಡ್ಡಿ ನರಸನ್ ಪ್ರಜಾವಾಣಿಗೆ ತಿಳಿಸಿದರು.
ರಕ್ಷಣೆ ಕಾರ್ಯದಲ್ಲಿ ರಾಮರೆಡ್ಡಿ ಪಾಟೀಲ, ಗೋಪಾಲ ಬಾಜೇಪಳ್ಳಿ, ಝರಣಪ್ಪ ಭಕ್ತಂಪಳ್ಳಿ, ಹಣಮಂತರೆಡ್ಡಿ ಹಾಗೂ ಸುಭಾಷ ನರನಾಳ ಮತ್ತು ದೇವಾಲಯದಲ್ಲಿ ಸಿಲುಕಿದ ಕುಟುಂಬದ ಸದಸ್ಯರು ಇದ್ದರು.