ಕಲಬುರಗಿ: ಧರ್ಮಗಳು ಜನರಿಗೆ ನೀತಿ ನಿಯಮಗಳನ್ನು ನೀಡಿ ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕು. ಆದರೆ ಇತ್ತೀಚೆಗೆ ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಭಾರತದ ಭಾವೈಕ್ಯಕ್ಕೆ ಮತೀಯ ಕೊಡಲಿ ಪೆಟ್ಟು ನೀಡುತ್ತಿದೆಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಲಂಡನಕರ್ ಬೇಸರ ವ್ಯಕ್ತಪಡಿಸಿದರು.
ಹನುಮಾನ್ ನಗರ ತಾಂಡಾದಲ್ಲಿ ಸ್ಟೇಷನ್ ಬಜಾರ್ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
‘ಯುವಕರು ಇಂಥ ಬೌದ್ಧಿಕ ಅಧಃಪತನದ ಕಡೆಗೆ ಹೋಗಬಾರದು. ಭಾರತವು ಸ್ವಾತಂತ್ರ್ಯ ಪಡೆಯಬೇಕಾದರೆ ಯುವಕರ ತ್ಯಾಗ, ಬಲಿದಾನದ ಮಹತ್ವವನ್ನು ನಾವು ಸಾರಬೇಕಾಗಿದೆ. ಬ್ರಿಟಿಷರ ವಿರುದ್ಧ ಸಂಘಟಿತವಾಗಿ ಹೋರಾಡಿದ್ದರ ಫಲವೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಜಾತಿ ಪದ್ಧತಿ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬಡತನ, ನಿರುದ್ಯೋಗ, ಭ್ರಷ್ಟಾಚಾರ ಇವು ಬಲಿಷ್ಠ ಭಾರತಕ್ಕೆ ಅಡ್ಡಗಾಲು ಆಗಿದ್ದು, ಇಂಥ ಪಿಡುಗುಗಳ ವಿರುದ್ಧ ಹೋರಾಡಿ ಬಲಿಷ್ಠ ಭಾರತ ಕಟ್ಟಬೇಕು’ ಎಂದರು.
ಶಿಬಿರ ಉದ್ಘಾಟಿಸಿದ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ್, ‘ನಾಯಕತ್ವ ಗುಣ ಕಲಿಸುವುದೇ ಎನ್ಎಸ್ಎಸ್ ಮುಖ್ಯ ಗುರಿ. ಸಾಮಾಜಿಕ, ಶೈಕ್ಷಣಿಕ ವೈಜ್ಞಾನಿಕ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಾಯವಾಗುತ್ತದೆ. ಇದರ ಲಾಭ ಪಡೆದು ಸ್ವಯಂಸೇವಕರಾದ ನೀವು ಸರ್ಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಇತಿಹಾಸವನ್ನು ಇತಿಹಾಸ ದೃಷ್ಟಿಯಿಂದಲೇ ನೋಡಬೇಕು. ಮತಿಯ ದೃಷ್ಟಿಯಿಂದ ಅಲ್ಲ. ಇತ್ತೀಚೆಗೆ ಇತಿಹಾಸ ತಿರುಚುವಿಕೆ ನಡೆದಿದ್ದು ಸಮಾಜಕ್ಕೆ ಘಾತಕವಾಗಿದೆ’ ಎಂದು ಹೇಳಿದರು.
ಎನ್ಎಸ್ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ ದೊಡಮನಿ, ಪ್ರಸ್ತಾವಿಕವಾಗಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪಾಂಡು ಎಲ್. ರಾಠೋಡ ಮಾತನಾಡಿದರು. ಅಧ್ಯಕ್ಷತೆಯನ್ನು ಸುಜಾತಾ ಬಿರಾದಾರ ವಹಿಸಿದ್ದರು.
ಬಲರಾಮ ಚವಾಣ್ ನಿರ್ವಹಣೆ ಮಾಡಿದರು. ವಿಜಯಲಕ್ಷ್ಮಿ ರೆಡ್ಡಿ ಸ್ವಾಗತಿಸಿದರು. ಶ್ರೀಶೈಲ್ ಖುರ್ದು ವಂದಿಸಿದರು. ಸಹಾಯಕ ಕಾರ್ಯಕ್ರಮ ಅಧಿಕಾರಿ ಸಿದ್ದಲಿಂಗಪ್ಪ ಪೂಜಾರಿ, ಬಾಬು ಲೋಕು ಚೌಹಾಣ್, ರೇಖಾ ರಾಯಚೂರ, ಮಾಪಣ್ಣ ಜಿರೋಳ್ಳಿ, ಮಲ್ಲಯ್ಯ ಮಠಪತಿ, ರಾಜೇಶ್, ಶ್ರೀನಿವಾಸ್, ರೋಹಿಣಿ ಶಶಿಧರ್ ಭೂಸನೂರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.