ಕಲಬುರಗಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಶೇ 75.48ರಷ್ಟು ಫಲಿತಾಂಶದ ಮೂಲಕ ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ 28ನೇ ಸ್ಥಾನ ಲಭಿಸಿದೆ.
2023ರ ಸಾಲಿನಲ್ಲಿ ಶೇ 69.37ರಷ್ಟು ಫಲಿತಾಂಶ ಬಂದು ರಾಜ್ಯದಲ್ಲಿ 29ನೇ ಸ್ಥಾನ ಪಡೆದಿತ್ತು. ಈ ವರ್ಷದ ಫಲಿತಾಂಶದಲ್ಲಿ ಶೇ 6.11ರಷ್ಟು ಹೆಚ್ಚಳವಾಗಿ, ಒಂದು ಸ್ಥಾನ ಮೇಲೆ ಬಂದಿದೆ.
ಪ್ರಸಕ್ತ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ರೆಗ್ಯುಲರ್, ಖಾಸಗಿ, ಪುನರಾವರ್ತಿತ ಸೇರಿ ಒಟ್ಟು 29,885 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ರೆಗ್ಯುಲರ್ ಪರೀಕ್ಷೆ ಬರೆದ ಒಟ್ಟು 26,599 ವಿದ್ಯಾರ್ಥಿಗಳಲ್ಲಿ 20,078 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಎದುರಿಸಿದ 997 ಮಂದಿಯಲ್ಲಿ 389 ಮಂದಿ ಹಾಗೂ ಮರು ಪರೀಕ್ಷೆ ಬರೆದ 1,076 ವಿದ್ಯಾರ್ಥಿಗಳಲ್ಲಿ 425 ಮಂದಿ ಪಾಸಾಗಿದ್ದಾರೆ. ರೆಗ್ಯುಲರ್, ರಿಪೀಟರ್ಸ್ ಹಾಗೂ ಖಾಸಗಿ ಸೇರಿ ಒಟ್ಟು 28,599 ಮಂದಿ ಪರೀಕ್ಷೆ ಬರೆದಿದ್ದು, 20,892 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಶೇ 60.83ರಷ್ಟು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶೇ 83.55ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ಫಲಿತಾಂಶದಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ, ವಿಜ್ಞಾನ ವಿಭಾಗದಲ್ಲಿ ಪುರುಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಶೇ 75.17ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ 70.32ರಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡ 12,648 ವಿದ್ಯಾರ್ಥಿಗಳ ಪೈಕಿ 10,969 ಮಂದಿ ತೇರ್ಗಡೆ ಆಗುವ ಮೂಲಕ ಶೇ 86.73ರಷ್ಟು ಫಲಿತಾಂಶ ಸಾಧಿಸಿದ್ದಾರೆ. ವಾಣಿಜ್ಯ ವಿಭಾಗದ 3,692 ಮಂದಿಯಲ್ಲಿ 2,548 (ಶೇ 69.01ರಷ್ಟು) ಮಂದಿ ಮತ್ತು ಕಲಾ ವಿಭಾಗದ 10,259 ವಿದ್ಯಾರ್ಥಿಗಳಲ್ಲಿ 6,561 (ಶೇ 63.95ರಷ್ಟು) ಮಂದಿ ಪಾಸಾಗಿದ್ದಾರೆ.
ಗ್ರಾಮೀಣ ಭಾಗದ 3,713 ವಿದ್ಯಾರ್ಥಿಗಳ ಪೈಕಿ 2,615 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ನಗರ ಪ್ರದೇಶದ 22,886 ವಿದ್ಯಾರ್ಥಿಗಳಲ್ಲಿ 17,463 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶ ಶೇ 70.43ರಷ್ಟು ಇದ್ದರೆ, ನಗರದ್ದು ಶೇ 76.3ರಷ್ಟು ಇದೆ. ಗ್ರಾಮೀಣ ಭಾಗಕ್ಕಿಂತ ನಗರದ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಶೇ 5.87ರಷ್ಟು ಹೆಚ್ಚಿದೆ.
ಪಿಸಿಎಂಬಿ ಕನ್ನಡ ಮಾಧ್ಯಮ, 10 ಮಂದಿ ಪಾಸ್: ವಿಜ್ಞಾನ ವಿಭಾಗದ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ (ಪಿಸಿಎಂಬಿ) ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ 40 ವಿದ್ಯಾರ್ಥಿಗಳ ತೆಗೆದುಕೊಂಡಿದ್ದರು. ಈ ಪೈಕಿ 10 ಮಂದಿ ಮಾತ್ರ ಪಾಸಾಗಿದ್ದಾರೆ.
ಅಫಜಲಪುರದ ಟಿಇಎಸ್ ಖಾದರ್ ಪಟೇಲ್ ಪಿಯು ಕಾಲೇಜು ಮತ್ತು ನಗರದ ಜಿಡಿಎ ಕಾಲೊನಿಯ ಎಚ್ಕೆ ಗರಿಬ್ ನವಾಜ್ ಪಿಯು ಕಾಲೇಜು ಶೂನ್ಯ ಫಲಿತಾಂಶ ದಾಖಲಿಸಿವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಕಲಿಕಾ ವಾತಾವರಣವನ್ನು ಕಾಲೇಜಿನಲ್ಲಿ ಒದಗಿಸಲಾಗಿತ್ತು. ಜತೆಗೆ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದ್ದೆವುಪ್ರೊ.ಚನ್ನಾರೆಡ್ಡಿ ಪಾಟೀಲ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.