ಕಲಬುರಗಿ: ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ್ ಕಲಬುರಗಿ ವಿಮಾನ ನಿಲ್ದಾಣ ಕುರಿತು ಚರ್ಚೆ ನಡಸಿದರು. ಕಲಬುರಗಿಯಿಂದ ಮುಂಬೈ, ಮಂಗಳೂರು, ಪುಣೆ, ಅಹಮದಾಬಾದ್ ಹಾಗೂ ವಾರಾಣಸಿ ನಗರಗಳಿಗೆ ನೂತನ ವಿಮಾನಯಾನ ಪ್ರಾರಂಭಿಸುವುದು. ನೈಟ್ ಲ್ಯಾಂಡಿಂಗ್ ಕಾರ್ಯ ಶೀಘ್ರ ಮುಕ್ತಾಯಗೊಳಿಸಲು ಕೇಳಿಕೊಂಡರು.
ಕಲಬುರಗಿ–ಹಿಂಡನ್ (ದೆಹಲಿ) ವಿಮಾನದ ಪ್ರಯಾಣವನ್ನು ವಾರಕ್ಕೆ 4 ದಿನ ಹೆಚ್ಚಿಸುವುದು ಹಾಗೆಯೇ ಈಗಿರುವ ಟರ್ಮಿನಲ್ ಸಾಮರ್ಥ್ಯವನ್ನು 500 ಪ್ರಯಾಣಿಕರ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಪರಿವರ್ತಿಸಲು ವಿನಂತಿಸಲಾಯಿತು.
‘ಇದಕ್ಕೆ ಸ್ಪಂದಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಲಬುರಗಿ ವಿಮಾನ ನಿಲ್ದಾಣದ ಸಂಪೂರ್ಣ ವಿವರ ಪರಿಶೀಲಿಸಿದ್ದೇನೆ. ಈ ವಿಮಾನ ನಿಲ್ದಾಣವು ಪ್ರಾರಂಭವಾದ ದಿನದಿಂದ ಪ್ರಯಾಣಿಕರ ನಿರ್ವಹಣೆ ದೃಷ್ಟಿಯಿಂದ ತುಂಬಾ ಪ್ರಗತಿಯಲ್ಲಿದೆ. ತಾಂತ್ರಿಕ ಕಾರಣಗಳಿಂದ ನೈಟ್ ಲ್ಯಾಂಡಿಂಗ್ ಸೇವೆ ವಿಳಂಬವಾಗಿದ್ದು ಅತಿ ಶೀಘ್ರದಲ್ಲಿ ಇದನ್ನು ಮುಕ್ತಾಯಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಕಲಬುರಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದಾರೆ’ ಎಂದು ಸಂಸದ ಜಾಧವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.