ಕಲಬುರ್ಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ ಹಾಗೂ ಅವರ ಆಪ್ತರ ಮನೆಗಳ ಮೇಲೆ ಸೋಮವಾರ ನಡೆದ ಸಿಬಿಐ ದಾಳಿಯನ್ನು ಖಂಡಿಸಿ ಯುವ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಡಿ.ಕೆ. ಶಿವಕುಮಾರ್ ಭಾವಚಿತ್ರದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಅಲ್ಲದೇ ಶಿವಕುಮಾರ್ ಹಾಗೂ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು.
ಶಿವಕುಮಾರ್ ಹಾಗೂ ಸುರೇಶ್ ಅವರ ಮನೆಗಳ ಮೇಲೆ ದಾಳಿ ಮಾಡಿದ್ದು ಖಂಡನೀಯ. ದಾಳಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಾಜಕೀಯ ಪ್ರೇರಿತವಾಗಿದೆ. ಸಿಬಿಐ ಅಧಿಕಾರಿಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಣತಿಯಂತೆ ವರ್ತಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಮೀರಿ ಅವರ ಮೇಲೆ ದಾಳಿ ಮಾಡಬಾರದೆಂದು ನ್ಯಾಯಾಲಯದ ಆದೇಶವಿದೆ. ಆದಾಗ್ಯೂ, ಇದನ್ನು ಮೀರಿ ಸಿಬಿಐ ಅಧಿಕಾರಿಗಳು ನ್ಯಾಯಾಲಯದ ಆದೇಶವು ಉಲ್ಲಂಘನೆ ಮಾಡಿ ಕೇಂದ್ರ ಸರ್ಕಾರದ ಆಣತಿಯಂತೆ ವರ್ತನೆ ಮಾಡಿ ದಾಳಿ ಮಾಡಿದ್ದಾರೆ. ಇದು ಖಂಡನಿಯವಾಗಿದೆ. ಇತ್ತೀಚೆಗೆ ಘೋಷಣೆಯಾಗಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಎರಡೂ ಉಪ ಚುನಾವಣೆ ಘೋಷಣೆಯಾದ ನಂತರ ಕೀಳು ಮಟ್ಟದ ರಾಜಕೀಯ ದಾಳಿಯಾಗಿದೆ. ಶಿವಕುಮಾರ್ ಹಾಗೂ ಸುರೇಶ ಸಹೋದರರನ್ನು ಚುನಾವಣೆಯಲ್ಲಿ ಹೆದರಿಸುವ ಸಲುವಾಗಿ ದಾಳಿ ಮಾಡಿದ್ದಾರೆ. ಈ ಕೃತ್ಯವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ದಾಳಿ ಮುಂದುವರೆಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಪಾಟೀಲ ಝಳಕಿ, ಮಜರ ಅಲಂಖಾನ್, ಸಂತೋಷ ಪಾಟೀಲ ದಣ್ಣೂರ, ಮಹೇಶ ವಟವಟಿ, ಶಿವಾನಂದ ಹೊನಗುಂಟಿ, ಶಕೀಲ್ ಸರಡಗಿ, ಹಣಮಂತ, ಪರಶುರಾಮ ನಾಟೀಕಾರ, ಅರುಣ ಭರಣಿ, ಕಾರ್ತಿಕ ನಾಟಿಕಾರ, ಉಜಿಲ್, ರಾಜ ನಾಯಕ್ ಪಾಲ್ಗೊಂಡಿದ್ದರು.