ಸೋಮವಾರಪೇಟೆ: ಸಮೀಪದ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ಶುಕ್ರವಾರ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ.
ಗೋಣಿಮರೂರು ಹಾಡಿ ನಿವಾಸಿ ಕರಿಯಪ್ಪ (46) ಅವರನ್ನು ಪುತ್ರ ಲೋಕೇಶ್(25) ಹತ್ಯೆ ಮಾಡಿದ್ದು, ಇವನ ತಾಯಿ ಲೀಲಾ (38) ತೀವ್ರ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಮದ್ಯಪಾನ ಮಾಡಲು ತಂದೆ ಕರಿಯಪ್ಪ ಬಳಿ ಲೋಕೇಶ್ ಹಣ ಕೇಳಿದ್ದು, ಅವರು ನಿಕಾರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗ ಮರದ ದೊಣ್ಣೆಯಿಂದ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆಸಿದ್ದಾನೆ.
ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಕರಿಯಪ್ಪ ಅವರು ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದಾರೆ.ಲೀಲಾ ಅವರಿಗೂ ಗಂಭೀರ ಪ್ರಮಾಣದ ಗಾಯಗಳುಂಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಶನಿವಾರ ಮಧ್ಯಾಹ್ನ ಬಾಣಾವರ ಸಮೀಪದಲ್ಲಿ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.