ಸೋಮವಾರಪೇಟೆ: ತಾಲ್ಲೂಕಿನ ಕಿಕ್ಕರಳ್ಳಿಯಲ್ಲಿ ಕಳೆದ ಶನಿವಾರ ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭ ಪಕ್ಕದ ಕಾಫಿ ಮತ್ತು ಏಲಕ್ಕಿ ತೋಟಗಳಿಗೂ ಬೆಂಕಿ ವ್ಯಾಪಿಸಿದ್ದು, ಸಾಕಷ್ಟು ಹಾನಿಯಾಗಿದೆ.
ಗ್ರಾಮ ನಿವಾಸಿ ಅನಿಲ್ ಕುಮಾರ್ ಸೇರಿದಂತೆ ಅಕ್ಕಪಕ್ಕದ ರೈತರ ಜಮೀನಿನಲ್ಲಿದ್ದ ಕಾಫಿ, ಏಲಕ್ಕಿ ಗಿಡಗಳು, ನೀರಿನ ಪೈಪ್ಗಳು, ಜೇನುಪೆಟ್ಟಿಗೆಗಳು ಸುಟ್ಟು ಹೋಗಿವೆ.
‘ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕೃಷಿ ಮಾಡುವುದೇ ಕಷ್ಟಕರವಾಗಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಮಳೆಗಾಲದಲ್ಲಿ ರೋಗಬಾಧೆಯಿಂದ ಕಾಫಿ, ಏಲಕ್ಕಿಯನ್ನು ಉಳಿಸಿಕೊಳ್ಳುವುದೇ ದುಸ್ತರ. ಕಾಫಿ ಗಿಡಗಳಿಗೆ 15 ವರ್ಷವಾಗಿತ್ತು. ಉತ್ತಮ ಫಸಲು ಬಂದಿದ್ದು, ಕೊಯ್ಲು ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ಅನಿಲ್ ಅಳಲು ತೋಡಿಕೊಂಡರು.
‘ಪರಿಹಾರಕ್ಕಾಗಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದರೂ, ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ನೋವು ತೋಡಿಕೊಂಡರು.