ಮಡಿಕೇರಿ: ಕೊಡಗಿನ ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬುಧವಾರ ರಾತ್ರಿ ಭೀಕರ ಭೂಕುಸಿತ ಸಂಭವಿಸಿದ್ದು ಮಣ್ಣಿನ ಅಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಗೆ ಮಳೆ, ಗಾಳಿ ಹಾಗೂ ಪದೇ ಪದೇ ಮಣ್ಣು ಕುಸಿಯುತ್ತಿರುವುದು ಅಡ್ಡಿಯಾಗಿದೆ. ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಭಾಗಮಂಡಲ ಸಂಪೂರ್ಣ ಜಲಾವೃತಗೊಂಡಿರುವ ಭಾಗಮಂಡಲ ದಾಟಿ, ತಲಕಾವೇರಿಯ ಭೂಕುಸಿತ ಸ್ಥಳದಲ್ಲಿ ಎನ್ಡಿಆರ್ಎಫ್, ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ ಸಹ ಸ್ಥಳದಲ್ಲಿದ್ದಾರೆ.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅಚ೯ಕರೂ ಸೇರಿದಂತೆ ಐವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾರಾಯಣ ಆಚಾರ್ ಅವರ ನೇತೃತ್ವದಲ್ಲಿಯೇ ಪ್ರತಿ ವರ್ಷ ತೀರ್ಥೋದ್ಭವ ಸೇರಿದಂತೆ ಪ್ರಮುಖ ಪೂಜಾ ಕಾರ್ಯಗಳು ಈ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿದ್ದವು. ಅವರು ತಲಕಾವೇರಿಯೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಅಲ್ಲಿಂದ ಸ್ಥಳಾಂತರ ಆಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
‘2019ರಲ್ಲಿ ಇದೇ ಸ್ಥಳದಲ್ಲಿ ಬೆಟ್ಟ ಬಿರುಕು ಬಿಟ್ಟಿತ್ತು. ಆಗ ಅಲ್ಲಿನ ಅರ್ಚಕ ಕುಟುಂಬಕ್ಕೆ ಜಿಲ್ಲಾಡಳಿತ ನೋಟಿಸ್ ನೀಡಿ ಸ್ಥಳಾಂತರಕ್ಕೆ ಸೂಚಿಸಿತ್ತು. ಎರಡು ಕುಟುಂಬಗಳು ಅಲ್ಲಿಂದ ಭಾಗಮಂಡಲದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರೆ ನಾರಾಯಣ ಆಚಾರ್ ಕುಟುಂಬ ಮಾತ್ರ ಅಲ್ಲಿಂದ ಸ್ಥಳಾಂತರ ಆಗಿರಲಿಲ್ಲ.
ಎರಡು ಮನೆಗಳೂ ಸಂಪೂರ್ಣ ನೆಲಸಮವಾಗಿದ್ದು ಯಾವುದೇ ಕುರುಹು ಸಿಗುತ್ತಿಲ್ಲ. ಕಾರು ಹಾಗೂ ಅವರು ಸಾಕಿದ್ದ ಹಸುಗಳೂ ಮಣ್ಣು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 6 ಕಿ.ಮೀ ಉದ್ದಕ್ಕೆ ಬೆಟ್ಟದ ಸಾಲು ಕುಸಿದು ಬಿದ್ದಿದೆ.
ಇನ್ನು ಕೊಡಗು ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು ಜಿಲ್ಲೆಯ ಜನರಿಗೆ ಆತಂಕ ತಂದೊಡ್ಡಿದೆ.
ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಮಳೆ, ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಡಗು ತತ್ತರಿಸಿದೆ.
ಕುಶಾಲನಗರದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆ ಜಲಾವೃತಗೊಂಡಿದ್ದು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಸತತ ಮೂರನೇ ವರ್ಷ:ಸತತ ಮೂರನೇ ವರ್ಷವೂ ಕೊಡಗು ಜಿಲ್ಲೆಯು ಭೀಕರ ದುರಂತಕ್ಕೆ ತುತ್ತಾಗಿದೆ. ಕಳೆದ ಎರಡು ವರ್ಷವೂ ಇದೇ ರೀತಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಮಹಾಮಳೆ ಸಾವು ನೋವಿಗೆ ಕಾರವಾಗಿತ್ತು. ಅದೇ ರೀತಿಯ ಕಹಿ ಘಟನೆಗಳು ಮತ್ತೆ ಮರುಕಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.