ಮಡಿಕೇರಿ: ಕೊಡಗು ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಎಂ.ಪಿ.ಸುನಿಲ್ ಸುಬ್ರಮಣಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಅವರ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್ ಸಿಕ್ಕಿದೆ. ಶುಕ್ರವಾರ ರಾತ್ರಿ ಬಿಜೆಪಿ ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸಿದೆ.ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಅಣ್ಣ ಸುಜಾ.
ಈ ಬಾರಿಯೂ ಬಿಜೆಪಿ ಕೊಡಗಿನಲ್ಲಿ ಕುಟುಂಬ ರಾಜಕಾರಣದ ಮೊರೆಹೋಗಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಅವಧಿಯಲ್ಲಿ ಸುಜಾ ಹೆಸರು ಘೋಷಣೆಯಾಗಿದ್ದರೂ ಕಾನೂನು ತೊಡಕಿನಿಂದ ಸ್ಪರ್ಧೆ ಸಾಧ್ಯವಾಗಿರಲಿಲ್ಲ. ಅವರ ತಮ್ಮ ಸುನಿಲ್ಗೆ ಟಿಕೆಟ್ ಲಭಿಸಿತ್ತು.
ಸುಜಾ ಅವರು ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಮುಖಂಡರಾದ ಬಿ.ಬಿ.ಭಾರತೀಶ್ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರೂ ತೆರೆಮರೆಯಲ್ಲಿ ಟಿಕೆಟ್ಗೆ ಲಾಬಿ ನಡೆಸಿದ್ದರು. ಆದರೆ, ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿಲ್ಲ. ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಜೆಡಿಎಸ್ ಇನ್ನೂ ಲೆಕ್ಕಾಚಾರದಲ್ಲಿ ಇದೆ.