ಗೋಣಿಕೊಪ್ಪಲು: ಬಿರುನಾಣಿಯ ಕಾಫಿ ಬೆಳೆಗಾರ ಚೊಟ್ಟಂಗಡ ರೋಷನ್ ಅವರ ತೋಟದ ಲೈನ್ ಮನೆಯಲ್ಲಿ ಅಡಗಿದ್ದ ಅಂದಾಜು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಆಂಟೋನಿ ಹಿಡಿದು ಅರಣ್ಯಕ್ಕೆ ಬಿಟ್ಟರು.
ತೋಟದ ಕಾರ್ಮಿಕರು ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮನೆಗೆ ತೆರಳಿದಾಗ ಕಾಳಿಂಗ ಸರ್ಪದ ಸದ್ದು ಕೇಳಿ ಬಂದಿದೆ. ಇದನ್ನು ಕಂಡ ಕಾರ್ಮಿಕರು ಮಾಲೀಕ ರೋಷನ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ರೋಷನ್ ಆಂಟೋನಿಯವರನ್ನು ಕರೆಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಸಿ ಆತಂಕವನ್ನು ದೂರ ಮಾಡಿದರು.
ಸೆರೆ ಹಿಡಿದ ಕಾಳಿಂಗವನ್ನು ಆಂಟೋನಿ ಚೀಲದಲ್ಲಿ ತುಂಬಸಿಕೊಂಡು ಸಾಗಿ ಬ್ರಹ್ಮಗಿರಿ ಅರಣ್ಯಕ್ಕೆ ಬಿಟ್ಟರು.